top of page

ಅಭಿವೃದ್ಧಿ ಹೊಂದಿದ ಭಾರತಕ್ಕೆ ನೀಲನಕ್ಷೆ ಒದಗಿಸಿದ ಮೋದಿ

Writer: Ananthamurthy m Hegde
Ananthamurthy m Hegde
Jan 1, 2025
1 min read

ಹೊಸದಿಲ್ಲಿ: ಹೊಸ ವರ್ಷದ ಹೊಸ್ತಿಲಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು 2047ರ 'ಅಭಿವೃದ್ಧಿ ಹೊಂದಿದ ಭಾರತ'ಕ್ಕೆ ನೀಲನಕ್ಷೆ ಒದಗಿಸಿದ್ದಾರೆ. ಸರ್ವರಿಗೂ ಅಭಿವೃದ್ಧಿ ಮತ್ತು ಅವಕಾಶಗಳನ್ನು ಒಳಗೊಂಡ ಭವಿಷ್ಯವನ್ನು ಸೃಷ್ಟಿಸಲು ಕರೆ ನೀಡಿದ್ದಾರೆ.

ಕಳೆದ 2024ನೇ ವರ್ಷದಲ್ಲಿ ಸಾಧನೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಪ್ರಗತಿಯನ್ನು ಮೆಲುಕು ಹಾಕಿರುವ ಮೋದಿ, ''2047ರ ವಿಕಸಿತ ಭಾರತ'ದ ಕನಸು ನನಸಾಗಿಸಲು ಇನ್ನಷ್ಟು ಶ್ರಮಪಡೋಣ. ಸದೃಢ ಭಾರತ ಕಟ್ಟಲು ಪಣ ತೊಡುವ ಮೂಲಕ ಪರಿವರ್ತನೆ ಯುಗಕ್ಕೆ ಮುನ್ನುಡಿ ಬರೆಯೋಣ,'' ಎಂದು ಕರೆ ನೀಡಿದ್ದಾರೆ. ಎಕ್ಸ್‌ ವೇದಿಕೆಯಲ್ಲಿ'ಭಾರತ್‌ ಬ್ಲ್ಯೂಪ್ರಿಂಟ್‌' ಹೆಸರಿನಲ್ಲಿ ಸರಣಿ ಪೋಸ್ಟ್‌ಗಳನ್ನು ಮಾಡಿರುವ ಅವರು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

''ಕಳೆದ ಒಂದು ವರ್ಷದಲ್ಲಿ ಭಾರತ ಗಮನಾರ್ಹ ಸಾಧನೆ ಮಾಡಿದೆ. 2024ರಲ್ಲಿ ಹತ್ತು ಹಲವು ಬಗೆಯಲ್ಲಿ ದೇಶ ಸುಸ್ಥಿರ ಹಾಗೂ ಗಣನೀಯ ಪ್ರಗತಿ ಸಾಧಿಸಿದೆ. ಗ್ರಾಮೀಣ ವಿದ್ಯುದೀಕರಣ, ಆರ್ಥಿಕ ವ್ಯಾಪ್ತಿಯೊಳಗೆ ಸರ್ವ ಜನರ ಸೇರ್ಪಡೆ, ಅಶಕ್ತರಿಗೆ ಸೂರು, ಮಹಿಳಾ ಸಬಲೀಕರಣ, ಡಿಜಿಟಲ್‌ ಕ್ರಾಂತಿ, ಲಿಂಗ ಸಮಾನತೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ದೇಶ ಅಭೂತಪೂರ್ವ ಬೆಳವಣಿಗೆ ದಾಖಲಿಸಿದೆ. ಇದೇ ವೇಳೆ ಏಕತೆ ಹಾಗೂ ಸಹಿಷ್ಣುತೆ ತೋರಿಸುವ ಮೂಲಕ ಶಾಂತಿ ಸಂದೇಶ ಸಾರಿದ ವರ್ಷವಾಗಿದೆ,'' ಎಂದು ಬಣ್ಣಿಸಿದ್ದಾರೆ.

''ಸರಕಾರದ ಯೋಜನೆಗಳು, ನೀತಿಗಳು ದೇಶವನ್ನು ಸುಸ್ಥಿರ ಅಭಿವೃದ್ಧಿ ಹಾದಿಯತ್ತ ಮುನ್ನಡೆಸಿದೆ. ದೇಶದ ಬೆಳವಣಿಗೆಗೆ ರೂಪಿಸಿದ ಉಪಕ್ರಮಗಳು ಗ್ರಾಮೀಣ ಹಾಗೂ ನಗರ ನಡುವಿನ ಅಂತರವನ್ನು ಕಡಿಮೆ ಮಾಡಿದೆ,'' ಎಂದು ಮೋದಿ ಹೇಳಿದ್ದಾರೆ.

ಗ್ರಾಮೀಣಾಭಿವೃದ್ಧಿ:

* ಪ್ರಧಾನಮಂತ್ರಿ ಜನ್‌ಧನ್‌ ಯೋಜನೆ ಮೂಲಕ 54 ಕೋಟಿ ಜನರನ್ನು ಆರ್ಥಿಕ ವ್ಯವಸ್ಥೆಯೊಳಗೆ ತರಲಾಗಿದೆ

* ಗ್ರಾಮೀಣ ಪ್ರದೇಶದಲ್ಲಿ 3.2 ಕೋಟಿ ಮನೆಗಳನ್ನು ನಿರ್ಮಿಸಲಾಗಿದೆ. ಈ ಪೈಕಿ 2.7 ಕೋಟಿ ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲಾಗಿದೆ. ಶೇ.70ರಷ್ಟು ಮಹಿಳೆಯರು ಯೋಜನೆಯ ಲಾಭ ಪಡೆದಿದ್ದಾರೆ. 10 ತಿಂಗಳಲ್ಲಿ ಶೇ.67ರಷ್ಟು ಪ್ರಗತಿ ಸಾಧಿಸಲಾಗಿದೆ,'' ಎಂದು ಮೋದಿ ವಿವರಿಸಿದ್ದಾರೆ.

ಹಳ್ಳಿಗಳಲ್ಲಿ ಡಿಜಿಟಲ್‌ ಕ್ರಾಂತಿ:

6 ಲಕ್ಷ ಹಳ್ಳಿಗಳು 4ಜಿ ಸಂಪರ್ಕ ಹೊಂದಿವೆ. 2.41 ಲಕ್ಷ ಗ್ರಾಮ ಪಂಚಯಿತಿಗಳಿಗೆ ಫೈಬರ್‌ ನೆಟ್‌ವರ್ಕ್ ಸಂಪರ್ಕ ಕಲ್ಪಿಸಲಾಗಿದೆ.

'ಯುಪಿಐ' ತಾಂತ್ರಿಕ ಪ್ರಗತಿ:

ಯುನಿಫೈಡ್‌ ಪೇಮೆಂಟ್‌ ಇಂಟರ್‌ಫೇಸ್‌ (ಯುಪಿಐ) ಕ್ಷೇತ್ರದಲ್ಲಿ ಭಾರತ ಪ್ರಗತಿ

2017ರಲ್ಲಿ 40 ಕೋಟಿ ರೂ.ಗಳಿದ್ದ ಹಣ ವರ್ಗಾವಣೆ ಪ್ರಮಾಣ 2024ರಲ್ಲಿ 1.70 ಶತಕೋಟಿ ರೂ.ಗಳಿಗೆ ತಲುಪಿದೆ

ಪ್ರತಿನಿತ್ಯ 50 ಕೋಟಿ ರೂ.ಗಳಷ್ಟು ವ್ಯವಹಾರ ಯುಪಿಐ ಮೂಲಕ ನಡೆಯುತ್ತಿದೆ

ಆರ್ಥಿಕ ಸೇರ್ಪಡೆಗೆ 'ಜಾಮ್‌'

'ಜನ್‌ಧನ್‌ ಖಾತೆ, ಆಧಾರ್‌, ಮೊಬೈಲ್‌ ನಂಬರ್‌'ಜಾಮ್‌) ಮೂಲಕ ರೂಪಿಸಲಾದ ನೇರ ವರ್ಗಾವಣೆ ಮೂಲಕ ದೇಶದ ಎಲ್ಲಾ ಜನರನ್ನು ಆರ್ಥಿಕ ವ್ಯಾಪ್ತಿಯೊಳಗೆ ತರಲಾಗಿದೆ. 40 ಲಕ್ಷ ಕೋಟಿ ರೂ. ಹಣ ನೇರ ನಗದು ವರ್ಗಾವಣೆ ಮೂಲಕ ಜನರ ಖಾತೆ ಸೇರಿದೆ.

Comments


Top Stories

1/322
bottom of page