ಇಂಡಿಯಾ ಮೈತ್ರಿಕೂಟದ ನಾಯಕನಿಗೆ ಖಡಕ್ ಎಚ್ಚರಿಕೆ ನೀಡಿದ ಸಿ.ಎಂ ಸಿದ್ದರಾಮಯ್ಯ
- Ananthamurthy m Hegde
- Dec 10, 2024
- 1 min read

ಬೆಳಗಾವಿ : ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟದ ಸದಸ್ಯ ಪಕ್ಷವಾದ ಶಿವಸೇನೆಯ ಉದ್ದವ್ ಠಾಕ್ರೆ ಬಣದ ನಾಯಕನೊಬ್ಬನಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಖಡಕ್ ಎಚ್ಚರಿಕೆ ನೀಡಿದ್ದಾರೆ. ಬಾಲಿಶ ಹೇಳಿಕೆ ನೀಡದಂತೆ ವಾರ್ನ್ ಮಾಡಿದ್ದಾರೆ.
ಬೆಳಗಾವಿ ವಿಚಾರದಲ್ಲಿ ಆದಿತ್ಯ ಠಾಕ್ರೆ, ಉದ್ದಟತನದ ಹೇಳಿಕೆಯನ್ನು ನೀಡಿದ್ದರು. ಕಳೆದ ಮಹಾರಾಷ್ಟ್ರ ಅಸೆಂಬ್ಲಿ ಚುನಾವಣೆಯಲ್ಲಿ ಶಿವಸೇನೆಯ ಠಾಕ್ರೆ ಬಣದ ಗೆದ್ದ 20 ಶಾಸಕರಲ್ಲಿ ಆದಿತ್ಯ ಠಾಕ್ರೆ ಕೂಡಾ ಒಬ್ಬರು. ಮುಂಬೈನ ಮಹಾನಗರ ವ್ಯಾಪ್ತಿಯ ವರ್ಲಿ ಅಸೆಂಬ್ಲಿ ಕ್ಷೇತ್ರದ ಶಾಸಕರಾಗಿರುವ ಆದಿತ್ಯ ಠಾಕ್ರೆ, ಮಾಜಿ ಸಿಎಂ ಉದ್ದವ್ ಠಾಕ್ರೆ ಪುತ್ರ.
ಎರಡು ದಿನಗಳ ಹಿಂದೆ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಗೆ ಪತ್ರ ಬರೆದಿದ್ದ ಆದಿತ್ಯ ಠಾಕ್ರೆ, ಬೆಳಗಾವಿ ಮತ್ತು ಕಾರವಾರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿಸುವ ನಿರ್ಣಯವನ್ನು ಮಹಾರಾಷ್ಟ್ರ ಅಸೆಂಬ್ಲಿ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದರು. ಇದಕ್ಕೆ, ಸಿಎಂ ಸಿದ್ದರಾಮಯ್ಯ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ನಮಗೆಲ್ಲಾ ತಿಳಿದಿರುವಂತೆ ಬೆಳಗಾವಿ ಮತ್ತು ಕಾರವಾರದ ವಿಚಾರ ಗಂಭೀರವಾಗುತ್ತಿದೆ. ಮರಾಠಿ ಭಾಷಿಗರನ್ನು ರಕ್ಷಿಸಿಕೊಳ್ಳುವುದು ಮರಾಠಿಗರಾದ ನಮಗೆಲ್ಲಾ ಮುಖ್ಯವಾದ ವಿಚಾರ. ಹಾಗಾಗಿ, ನಾವೆಲ್ಲಾ ಸೇರಿ, ಬೆಳಗಾವಿ ಮತ್ತು ಕಾರವಾರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿಸುವ ನಿರ್ಣಯವನ್ನು ಸದನದಲ್ಲಿ ಪಾಸ್ ಮಾಡೋಣ" ಎಂದು ಮಹಾರಾಷ್ಟ್ರ ಸಿಎಂಗೆ ಪತ್ರದ ಮೂಲಕ ಒತ್ತಾಯಿಸಿದ್ದಾರೆ.
ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿರುವ ವೇಳೆಯೇ, ಆದಿತ್ಯ ಠಾಕ್ರೆ ಬರೆದ ಪತ್ರ, ಕರ್ನಾಟಕ ಸರ್ಕಾರದ ಕಣ್ಣು ಕೆಂಪಾಗಿಸಿದೆ. ಇದೊಂದು ಸೂಕ್ಷ್ಮ ವಿಚಾರ, ಬಾಲಿಶ ಹೇಳಿಕೆಯನ್ನು ನೀಡದಂತೆ, ಆದಿತ್ಯ ಠಾಕ್ರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆಯನ್ನು ನೀಡಿದ್ದಾರೆ.
ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಬೇಕು ಎನ್ನು ಹೇಳಿಕೆ ಅತ್ಯಂತ ಬಾಲಿಶ. ನಮಗೆ ಮಹಾಜನ್ ವರದಿಯೇ ಅಂತಿಮ. ಮಹಾಜನ್ ವರದಿಯನ್ನು ಒಪ್ಪಿಕೊಂಡ ಮೇಲೆ ಮುಗಿಯಿತು "ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಯಾರಾದ್ರೂ ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದ ಸಿಎಂ ಈ ಕಾರಣಕ್ಕೇ ಇದೊಂದು ಬಾಲಿಶ ಹೇಳಿಕೆ. MES ನವರು ಇದೇ ವಿಚಾರದಲ್ಲಿ ಪುಂಡಾಟಿಕೆ ಮಾಡಿದರೆ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆಯೇ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಯಾರೇ ಪುಂಡಾಟಿಕೆ ಮಾಡಿದರೂ ಸುಮ್ಮನಿರಲ್ಲ ಎಂದು ಸಿದ್ದರಾಮಯ್ಯ ವಾರ್ನಿಂಗ್ ನೀಡಿದ್ದಾರೆ.
ಎಂಇಎಸ್ ಪಡೆಗಳಿಗೆ ಬೆಳಗಾವಿಯಲ್ಲಿ ಸಮ್ಮೇಳನ ನಡೆಸಲು ಕರ್ನಾಟಕ ಸರ್ಕಾರ ಅನುಮತಿಯನ್ನು ನೀಡಿರಲಿಲ್ಲ. ವಿಧಾನ ಮಂಡಲದ ಚಳಿಗಾಲದ ಅಧಿವೇಶನ, ಬೆಳಗಾವಿಯಲ್ಲಿ ನಡೆಯುತ್ತಿರುವುದಕ್ಕೆ ವಿರೋಧಿಸಿ ಎಂಇಎಸ್ ನಾಯಕರು ಪ್ರತಿಭಟನೆಗೆ ಮುಂದಾಗಿದ್ದರು. ಅವರನ್ನು ಪೊಲೀಸರು ಬಂಧಿಸಿದ್ದರು.















Comments