ಬೆಳಗಾವಿ ಅಧಿವೇಶನ: ಮಂಗಳವಾರ- ಬುಧವಾರ ಉತ್ತರ ಕರ್ನಾಟಕ ಚರ್ಚೆಗೆ ಮೀಸಲು
- Ananthamurthy m Hegde
- Dec 8, 2024
- 1 min read

ಬೆಳಗಾವಿ: ಡಿಸೆಂಬರ್ 9ರಿಂದ ನಡೆಯಲಿರುವ ಚಳಿಗಾಲ ಅಧಿವೇಶನ ಯಶಸ್ಸಿಗೆ ಹಾಗೂ ಕಲಾಪವನ್ನು ರಚನಾತ್ಮಕವಾಗಿ ನಡೆಸಲು ಪರಿಷತ್ ಸದಸ್ಯರಿಗೆ ಅನೇಕ ಸಲಹೆಗಳನ್ನು ನೀಡಲಾಗಿದೆ. ಮಂಗಳವಾರ ಮತ್ತು ಬುಧವಾರ ಪ್ರಶ್ನೋತ್ತರ ವೇಳೆಯ ನಂತರ ಸಂಪೂರ್ಣ ಕಿತ್ತೂರು-ಕಲ್ಯಾಣ ಪ್ರಾಂತ್ಯಗಳ ಅಭಿವೃದ್ಧಿ ಕುರಿತು ಚರ್ಚಿಸಲು ಸದಸ್ಯರಿಗೆ ಸಲಹೆ ನೀಡಲಾಗಿದೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.ಅಧಿವೇಶನ ಹಿನ್ನೆಲೆಯಲ್ಲಿ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಶನಿವಾರ ಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಆಗುವುದಿಲ್ಲ. ಶಾಸಕರು, ಸಚಿವರು ಪ್ರವಾಸಕ್ಕೆ ಬಂದಂತೆ ಬರುತ್ತಾರೆ ಎಂದು ಮಾಧ್ಯಮಗಳಲ್ಲಿ ವರದಿ ಪ್ರಸಾರ ಆಗಿವೆ. ಹಾಗಾಗಿ, 9 ರಂದು ಮಧ್ಯಾಹ್ನ ಊಟದ ನಂತರ ವಿರೋಧ ಪಕ್ಷದ ನಾಯಕರು, ಆಡಳಿತ ಪಕ್ಷದ ನಾಯಕರ ಸಭೆ ಕರೆದಿದ್ದೇನೆ. ಪ್ರತಿಭಟನೆ ನಡೆಸಿ ಸದನದ ಸಮಯ ವ್ಯರ್ಥಗೊಳಿಸದೇ, ಸದನ ಸುಗಮವಾಗಿ ನಡೆಸಲು ಅವಕಾಶ ನೀಡುವಂತೆ ತಿಳಿಸಿದ್ದೇವೆ ಎಂದರು.ಈ ಬಾರಿ ಪರಿಷತ್ತಿನಲ್ಲಿ ಒಟ್ಟು 1397 ಪ್ರಶ್ನೆಗಳನ್ನು ಸ್ವೀಕರಿಸಲಾಗಿದ್ದು, ಅದರಲ್ಲಿ 150 ಚುಕ್ಕೆ ಗುರುತಿನ ಪ್ರಶ್ನೆಗಳು ಹಾಗೂ 81 ಗಮನ ಸೆಳೆಯುವ ಸೂಚನೆಗಳು ಬಂದಿರುತ್ತವೆ. ಈ ಅಧಿವೇಶನದಲ್ಲಿ 14 ಬಿಲ್ಗಳು ಪಾಸ್ ಆಗುತ್ತಿವೆ. ಇನ್ನು ಮೊದಲ ವಾರ ಮಂಗಳವಾರ ಹಾಗೂ ಬುಧವಾರ ಯುಕೆಪಿ, ಮಹಾದಾಯಿ, ರೈತರ ಸಮಸ್ಯೆ, ಕಬ್ಬು ಬೆಳೆಗಾರರ ಸಮಸ್ಯೆಗಳ ಕುರಿತ ಚರ್ಚೆಗಳಿಗೆ ಒತ್ತು ನೀಡಲಾಗುವುದು. ಅಧಿವೇಶನ ಮಂಗಳವಾರ ಮತ್ತು ಬುಧವಾರ ಪ್ರಶ್ನೋತ್ತರ ವೇಳೆ ನಂತರ ಸಂಪೂರ್ಣ ಕಿತ್ತೂರ ಕಲ್ಯಾಣ ಪ್ರಾಂತ್ಯಗಳ ಅಭಿವೃದ್ಧಿ ಚಿಂತನೆ ನಡೆಸಲು ಸಲಹೆ ನೀಡಲಾಗಿದೆ ಎಂದರು.ಬೆಳಗಾವಿಯನ್ನು ಅಧಿಕೃತವಾಗಿ ಎರಡನೇ ರಾಜಧಾನಿ ಅಂತಾ ಘೋಷಿಸುವಂತೆ ಒತ್ತಾಯ ವಿಚಾರಕ್ಕೆ ನಾಳೆ ಮುಖ್ಯಮಂತ್ರಿಗಳು ಬರುತ್ತಿದ್ದು, ಅವರನ್ನು ಬಿಡಬೇಡಿ. ಪಟ್ಟು ಹಿಡಿದು ಅವರನ್ನು ಕೇಳಿ. ನಾನು ಕೂಡ ಖಂಡಿತವಾಗಿ ಆ ನಿಟ್ಟಿನಲ್ಲಿ ಸರ್ಕಾರಕ್ಕೆ ಸಲಹೆ ನೀಡುತ್ತೇನೆ ಎಂದರು.















Comments