ಮಹಾರಾಷ್ಟ್ರ ಸರ್ಕಾರದ ಮಹತ್ವದ ನಿರ್ಣಯ! ಗಣೇಶ ಚತುರ್ಥಿ ಈಗ ಅಧಿಕೃತ ನಾಡಹಬ್ಬ
- Ananthamurthy m Hegde
- Aug 8
- 1 min read

ಮಹಾರಾಷ್ಟ್ರ: ಮಹಾರಾಷ್ಟ್ರದಲ್ಲಿ ಶತಮಾನಕ್ಕೂ ಅಧಿಕ ಕಾಲದಿಂದ ಆಚರಿಸಲಾಗುತ್ತಿರುವ ಸಾರ್ವಜನಿಕ ಗಣೇಶೋತ್ಸವಕ್ಕೆ ಇದೀಗ ಮಹತ್ವದ ಮಾನ್ಯತೆ ಸಿಕ್ಕಿದೆ. ಈ ಇತಿಹಾಸ ಪ್ರಸಿದ್ಧ ಆಚರಣೆಯನ್ನು ಮಹಾರಾಷ್ಟ್ರ ಸರ್ಕಾರ "ರಾಜ್ಯ ಹಬ್ಬ"ವಾಗಿ ಘೋಷಿಸಿದೆ. ದೇಶದೆಲ್ಲೆಡೆ ಇಂದ ಮಹಾರಾಷ್ಟ್ರದ ಗಣೇಶ ಚತುರ್ಥಿಗೆ ಜನಸಾಗರವೇ ಹರಿದು ಬರುತ್ತದೆ, ವಿಶ್ವದ ಶ್ರೀಮಂತ ಗಣೇಶ ಎಂದು ಖ್ಯಾತಿವೆತ್ತ ಲಾಲ್ ಬಾಗ್ ಚ ರಾಜಾ ಸೇರಿದಂತೆ ಹಲವು ವಿಶೇಷ ಗಣೇಶನ ಮೂರ್ತಿಗಳಿಗೆ ಹೆಸರುವಾಸಿ ಮಹಾರಾಷ್ಟ್ರ. ತಿಲಕರ ಹುಟ್ಟೂರು ಹಾಗೂ ಬಹುತೇಕ ಕಾರ್ಯಕ್ಷೇತ್ರವೂ ಮಹಾರಾಷ್ಟ್ರವಾದ್ದರಿಂದ ಜನರಿಗೆ ಇದೊಂದು ಭಕ್ತಿಯ ಜೊತೆ ಸಾಂಘಿಕ ಹೋರಾಟದ ಪ್ರತೀಕವೂ ಹೌದು.
ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಮಹಾರಾಷ್ಟ್ರ ಸರ್ಕಾರ ಅಧಿಕೃತ ಪ್ರಕಟಣೆಯೊಂದನ್ನು ಹೊರಡಿಸಿದೆ “ಇದು ನಮ್ಮ ರಾಜ್ಯದ ಸಾಂಸ್ಕೃತಿಕ ಪರಂಪರೆಯ ಪೋಷಣೆಗಾಗಿ ತೆಗೆದುಕೊಳ್ಳಲಾಗಿರುವ ನಿರ್ಧಾರ” ಎಂದು ತಿಳಿಸಿದೆ. ರಾಜ್ಯದ ಸಂಸ್ಕೃತಿ ಸಚಿವ ಆಶೀಶ್ ಶೇಲಾರ್ ಅವರು ಈ ವಿಷಯದ ಕುರಿತು ನಿರ್ಣಯವನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ.
“1893ರಲ್ಲಿ ಬಾಲ ಗಂಗಾಧರ ತಿಲಕ್ ಅವರು ಸಾರ್ವಜನಿಕ ಗಣೇಶೋತ್ಸವದ ಆರ್ಥಿಕ ಹಾಗೂ ಸಾಮಾಜಿಕ ಶಕ್ತಿಯನ್ನು ಅರಿತು ಈ ಹಬ್ಬವನ್ನು ಪ್ರಾರಂಭಿಸಿದರು. ಈ ಹಬ್ಬವು ಸಾಮಾಜಿಕ ಒಗ್ಗಟ್ಟು ಹಾಗೂ ರಾಷ್ಟ್ರಭಕ್ತಿಯ ಭಾವನೆಗೆ ಪೋಷಕವಾಗಿದೆ. ಹೀಗಾಗಿ, ಈ ಪರಂಪರೆಯ ಗೌರವಿಸುವುದಕ್ಕಾಗಿ ಈ ಘೋಷಣೆ ಮಾಡಲಾಗುತ್ತಿದೆ,” ಎಂದು ತಿಳಿಸಿದ್ದಾರೆ.
ಈ ಘೋಷಣೆಯೊಂದಿಗೆ, ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮಗಳಿಗೆ ಅಧಿಕೃತ ಮಾನ್ಯತೆ ದೊರಕಿದ್ದು, ಸರ್ಕಾರದಿಂದ ವಿವಿಧ ರೀತಿಯ ನೆರವು ಹಾಗೂ ಯೋಜನೆಗಳ ರೂಪದಲ್ಲಿ ಬೆಂಬಲ ದೊರೆಯಲಿದೆ ಎನ್ನುವುದು ನಿರೀಕ್ಷೆಯಿದೆ.















Comments