top of page

ಈ ಹಿಂದೆ ಭಾರತ ಭಿಕ್ಷುಕರ ರಾಷ್ಟ್ರವಾಗಿತ್ತು; ಸಚಿವ ಶ್ರೀರಾಮಲು

  • Writer: Ananthamurthy m Hegde
    Ananthamurthy m Hegde
  • 2 days ago
  • 1 min read

60 ವರ್ಷಗಳ ಕಾಂಗ್ರೆಸ್ ಆಡಳಿತದಲ್ಲಿ ಭಾರತ ದುರ್ಬಲ ಮತ್ತು ಭ್ರಷ್ಟ ರಾಷ್ಟ್ರವಾಗಿತ್ತು. ನಮ್ಮ ದೇಶವನ್ನು ಭಿಕ್ಷುಕರ ದೇಶ, ಹಾವಾಡಿಗರ ದೇಶ ಎಂದು ಕರೆಯಲಾಗುತ್ತಿತ್ತು. ಭಾರತದ ಅಭಿವೃದ್ಧಿಗೆ ನೆಹರು ಯಾವ ಕೊಡುಗೆಯೂ ನೀಡಿಲ್ಲ. ಕುಟುಂಬ ಸ್ವಾರ್ಥಕ್ಕಾಗಿ ಅಧಿಕಾರ ದುರುಪಯೋಗ ಮಾಡಿಕೊಂಡರು ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಅವರು ಮಂಗಳವಾರ ಆರೋಪಿಸಿದರು.

ಪ್ರಧಾನಿ ಮೋದಿ ಅವರು 11 ವರ್ಷಗಳ ಸಾಧನೆ ಕುರಿತು ವಿವರಿಸಲು ಪಕ್ಷದ ಜಿಲ್ಲಾ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ನೆಹರು ಕುಟುಂಬ ವೈಯಕ್ತಿಕ ಹಿತಾಸಕ್ತಿಗೆ ಕೆಲಸ ಮಾಡಿದೆಯೇ ವಿನಃ ದೇಶದ ಅಭಿವೃದ್ಧಿಗಾಗಿ ಕಾರ್ಯ ನಿರ್ವಹಿಸಿಲ್ಲ. ಭಾರತ-ಚೀನಾ ಯುದ್ಧದಲ್ಲಿ ಭಾರತ ಮಂಡಿಯೂರಲು ನೆಹರು ನಿಲುವೇ ಕಾರಣ. ಇಂದಿರಾಗಾಂಧಿ ಅವರು ತಮ್ಮ ಅಧಿಕಾರ ದುರ್ಬಳಕೆ ಮಾಡಿ ಕೊಂಡು ತುರ್ತು ಪರಿಸ್ಥಿತಿ ಹೇರಿದ್ದರು. ಪ್ರಜಾಸತ್ತೆಯನ್ನು ದುರ್ಬಲಗೊಳಿಸುವ ಇಂದಿರಾ ಗಾಂಧಿ ಹುನ್ನಾರ ನಡೆಸಿದರು. ಸೋನಿಯಾ, ರಾಹುಲ್ ಗಾಂಧಿ ಅನೇಕ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಈ ಕುಟುಂಬ ಇಂದಿಗೂ ಹಗರಣಗಳಿಂದ ಮುಕ್ತವಾಗಿಲ್ಲ. ಬೋಫೋರ್ಸ್ ಹಗರಣದಿಂದ ಗಾಂಧಿ ಕುಟುಂಬ ಹೊರಬಂದಿಲ್ಲ. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಹಾಗೂ ರಾಹುಲ್ ಗಾಂಧಿ ಜೈಲಿಗೆ ಹೋಗುವುದು ಖಚಿತ ಎಂದು ತಿಳಿಸಿದರು.

ಮೋದಿ ಅವರು ಅಧಿಕಾರಕ್ಕೆ ಬಂದ ಬಳಿಕ ದೇಶದ ಪ್ರಗತಿ ಏರುಗತಿಯಲ್ಲಿದೆ. ಜಾಗತಿಕವಾಗಿ ಭಾರತಕ್ಕೆ ದೊಡ್ಡ ಮನ್ನಣೆ ಸಿಕ್ಕಿದೆ. ಆರ್ಥಿಕವಾಗಿ ಪ್ರಬಲ ಶಕ್ತಿಯಾಗಿ ಭಾರತ ಹೊರ ಹೊಮ್ಮಲು ಮೋದಿ ಅವರ ಆಡಳಿತ ವೈಖರಿಯೇ ಕಾರಣವಾಗಿದೆ. ಕಾಂಗ್ರೆಸ್ 60 ವರ್ಷದಲ್ಲಿ ಮಾಡಿದ ಸಾಧನೆ ಶೂನ್ಯವಾಗಿದ್ದು ಕಾಂಗ್ರೆಸ್ 6 ದಶಕಗಳಲ್ಲಿ ಮಾಡದ ಅನೇಕ ಪ್ರಮುಖ ಯೋಜನೆಗಳನ್ನು ಮೋದಿ ಅವರು ಕೈಗೊಂಡು ಜಾಗತಿಕ ನಾಯಕ ಎನಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ, ವಿಮಾನ ನಿಲ್ದಾಣಗಳ ಅಭಿವೃದ್ಧಿ, ಬಡಜನರ ಕಲ್ಯಾಣಕ್ಕಾಗಿ ಜಾರಿಗೊಳಿಸಿದ ಯೋಜನೆಗಳು, ತ್ರಿವಳಿ ತಲಾಖ್ ರದ್ದು, ಜಮ್ಮುಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು, ವಕ್ಸ್ ಕಾಯ್ದೆ ತಿದ್ದುಪಡಿ, ಉಗ್ರರನ್ನು ಮಟ್ಟಹಾಕಲು ಕೈಗೊಂಡ ಅನೇಕ ದಿಟ್ಟ ನಿರ್ಧಾರಗಳು, ಪಹಲ್ಗಾಂನಲ್ಲಿ ದಾಳಿ ನಡೆಸಿದ ಉಗ್ರರನ್ನು ಮಟ್ಟ ಹಾಕುವಲ್ಲಿ ಯಶಸ್ವಿ, ಪಾಕಿಸ್ತಾನದ ವಿರುದ್ಧ ಆಪರೇಷನ್ ಸಿಂದೂರ ದಾಳಿ ನಡೆಸಿ, ಜಯ ಸಾಧಿಸಿದ್ದು ಹೀಗೆ ಹತ್ತಾರು ಪ್ರಮುಖ ನಿರ್ಧಾರಗಳನ್ನು ಕೈಗೊಂಡ ನರೇಂದ್ರ ಮೋದಿ ಅವರು, 11 ವರ್ಷಗಳ ಅವಧಿಯಲ್ಲಿ ದೇಶವನ್ನು ಪ್ರಗತಿಯತ್ತ ಕೊಂಡೊಯ್ಯುವತ್ತ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿ ಸಹ ಕೇಂದ್ರ ಸರ್ಕಾರದ ಅನೇಕ ಯೋಜನೆಗಳು ಜಾರಿಗೊಂಡು ಪ್ರಗತಿ ಹಂತದಲ್ಲಿವೆ. ರೈಲ್ವೆ ಮೇತುವೆಗಳು, ರಾಷ್ಟ್ರೀಯ ಹೆದ್ದಾರಿಗಳು ಅಭಿವೃದ್ಧಿಯಾಗಿವೆ ಎಂದರು.

Comments


Top Stories

bottom of page