ಕದಂಬ ಜಿಲ್ಲೆ ರಚನೆಗೆ ಬೆಂಬಲ ಸೂಚಿಸಿದ ಶಾಸಕರಾದ 'ಹೆಬ್ಬಾರ್ ' 'ಭೀಮಣ್ಣ '
- Ananthamurthy m Hegde
- Dec 24, 2024
- 1 min read
ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯ ಘಟ್ಟದ ಮೇಲಿನ ತಾಲೂಕುಗಳನ್ನು ಸೇರಿಸಿ ಕದಂಬ ಕನ್ನಡ ಜಿಲ್ಲೆ ರಚನೆಗೆ ಹೋರಾಟ ನಡೆಯುತ್ತಿದೆ. ಯಲ್ಲಾಪುರದ ಜನರ ಬೆಂಬಲ, ಅಭಿಪ್ರಾಯ ಸಂಗ್ರಹಣೆಗಾಗಿ ಜ.21 ರಂದು ಮಧ್ಯಾಹ್ನ 3 ಕ್ಕೆ ಯಲ್ಲಾಪುರದ ಅಡಕೆ ಭವನದಲ್ಲಿ ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಕದಂಬ ಕನ್ನಡ ಜಿಲ್ಲೆ ರಚನೆ ಮತ್ತು ಹಿತ ರಕ್ಷಣಾ ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಹೇಳಿದರು.
ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಘಟ್ಟದ ಮೇಲಿನ ತಾಲೂಕುಗಳ ಅಭಿವೃದ್ಧಿಯ ದೃಷ್ಟಿಯಿಂದ ಜಿಲ್ಲೆ ವಿಭಜನೆ ಅತ್ಯಗತ್ಯ. ಜಿಲ್ಲಾ ಕೇಂದ್ರದ ಬಗ್ಗೆ ಈಗಲೇ ನಿರ್ಣಯ ಬೇಡ. ಎಲ್ಲರೂ ಒಟ್ಟಾಗಿ ಜಿಲ್ಲೆಯ ರಚನೆಗೆ ಪ್ರಯತ್ನಿಸೋಣ. ನಂತರ ಅನುಕೂಲತೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಜಿಲ್ಲಾ ಕೇಂದ್ರದ ನಿರ್ಣಯವಾಗಲಿ ಎಂದು ಹೇಳಿದರು.
ಕದಂಬರು ಆಳಿದ ನೆಲ ಇದಾಗಿದ್ದು, ಅವರಿಗೆ ಗೌರವ ಸಲ್ಲಿಸುವ ನೆಲೆಯಲ್ಲಿ ಕದಂಬ ಕನ್ನಡ ಹೆಸರಿನಲ್ಲಿ ಜಿಲ್ಲೆಯಾಗಬೇಕು. ಹೋರಾಡ ತೀವ್ರಗೊಳಿಸಲು ನಿರ್ಧರಿಸಿ, ಎಲ್ಲ ತಾಲೂಕುಗಳಲ್ಲಿ ಪೂರ್ವಭಾವಿ ಸಭೆಯೊಂದಿಗೆ ಜನ ಬೆಂಬಲ ಪಡೆಯಲು ಆರಂಭಿಸಿದ್ದೇವೆ. ಉತ್ತಮ ಸ್ಪಂದನೆ ದೊರೆಯುತ್ತಿದೆ ಎಂದರು.
ಬೆಳಗಾವಿಯಲ್ಲಿ ಅಧಿವೇಶನದ ವೇಳೆ ಪ್ರತಿಭಟನೆ ನಡೆಸಿದಾಗ ಶಾಸಕ ಶಿವರಾಮ ಹೆಬ್ಬಾರ ಹೋರಾಟಕ್ಕೆ ಬೆಂಬಲಿಸುವುದಾಗಿ ತಿಳಿಸಿದ್ದಾರೆ. ಶಾಸಕ ಭೀಮಣ್ಣ ನಾಯ್ಕ ಸಹ ಹೋರಾಟದಲ್ಲಿ ನಮ್ಮೊಂದಿಗೆ ಇದ್ದು, ಬೆಂಬಲಿಸಿದ್ದಾರೆ. ಆಡಳಿತದವರ ಜತೆ ಜನ ಬೆಂಬಲವೂ ದೊರೆತರೆ ಯಶಸ್ಸು ಸಿಗಲು ಸಾಧ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹೋರಾಟ ಸಮಿತಿಯ ವಿ.ಎಂ.ಭಟ್ಟ, ಸ್ಥಳೀಯ ಪ್ರಮುಖರಾದ ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ, ಉಮೇಶ ಭಾಗ್ವತ, ಗಣಪತಿ ಬೋಳಗುಡ್ಡೆ, ಪ್ರಸಾದ ಹೆಗಡೆ, ರಾಘವೇಂದ್ರ ಭಟ್ಟ, ಗಣೇಶ ಹೆಗಡೆ, ಬಾಬು ಬಾಂದೇಕರ್, ರವಿ ದೇವಡಿಗ ಇದ್ದರು.
Comments