ಜ್ಯೋತಿರ್ವನದಲ್ಲಿ ಜ್ಯೋತಿರ್ಮಂಡಲ ದೀಪೋತ್ಸವ
ಯಲ್ಲಾಪುರ: ತಾಲೂಕಿನ ಉಮ್ಮಚಗಿ ಕಾಗಾರಕೊಡ್ಲಿನ ಸುಮೇರು ಜ್ಯೋತಿರ್ವನದಲ್ಲಿ ಜ್ಯೋತಿರ್ಮಂಡಲ ದೀಪೋತ್ಸವ ಬುಧವಾರ ಸಂಜೆ ನಡೆಯಿತು.
ಶಿರಸಿಯ ಮಕ್ಕಳ ತಜ್ಞ ಡಾ.ದಿನೇಶ ಹೆಗಡೆ ಹಾಗೂ ರಕ್ತನಿಧಿ ವೈದ್ಯಾಧಿಕಾರಿ ಡಾ.ಸುಮನ್ ಹೆಗಡೆ ಮೇರು ದೀಪೋಜ್ವಾಲನೆ ಮಾಡಿದರು. ನಂತರ ಮಾತನಾಡಿದ ಅವರು, ಧಾರ್ಮಿಕತೆಯಲ್ಲಿರುವ ವೈಜ್ಞಾನಿಕತೆಯನ್ನು ಸಮಾಜಕ್ಕೆ ತೋರಿಸುವ ಕಾರ್ಯವನ್ನು ಜ್ಯೋತಿರ್ವನದಲ್ಲಿ ಮಾಡುತ್ತಿರುವುದು ಉತ್ತಮ ಕಾರ್ಯ. ಇಂತಹ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು ಎಂದರು.
ಸಂಘಟಕ ಡಾ.ಕೆ.ಸಿ.ನಾಗೇಶ ಭಟ್ಟ ಮಾತನಾಡಿ, ವ್ಯಷ್ಟಿಯಲ್ಲಿ ಬಾಳು ಬೆಳಗಲಿ, ಸಮಷ್ಠಿಯಲ್ಲಿ ದೇಶ ಬೆಳಗಲಿ ಎಂಬ ಆಶಯದೊಂದಿಗೆ ಈ ದೀಪೋತ್ಸವ ಆಯೋಜಿಸಲಾಗುತ್ತಿದೆ ಎಂದರು.
ನಾಗೇಶ ಭಟ್ಟ ಅವರ ಮಾರ್ಗದರ್ಶನದಲ್ಲಿ ಶ್ರೀಚಕ್ರ ದೀಪ, ದಿಗ್ ದೀಪ, ಚತುರ್ವೇದ ದೀಪ, ಷಡಂಗ ದೀಪ, ಗ್ರಹ ದೀಪ, ನಕ್ಷತ್ರ ದೀಪ, ರಾಶಿಚಕ್ರ ದೀಪ, ಆರ್ಷ ದೀಪ, ಆಚಾರ್ಯ ದೀಪ, ಪಂಚಾಂಗ ದೀಪಗಳನ್ನು ಬೆಳಗಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ೪೦೦ ಕ್ಕೂ ಹೆಚ್ಚು ಜನರು ಅವರವರ ರಾಶಿ, ನಕ್ಷತ್ರ ದೀಪಗಳನ್ನು ಬೆಳಗಿದರು.







Comments