ಪ್ರತ್ಯೇಕ ಅಡಕೆ ಮಂಡಳಿ ಸ್ಥಾಪನೆಗೆ ಒಪ್ಪದ ಕೇಂದ್ರ ಸರಕಾರ : ರಾಜ್ಯದ ಬೆಳೆಗಾರರಲ್ಲಿ ಭಾರಿ ನಿರಾಸೆ
- Ananthamurthy m Hegde
- Jan 2
- 2 min read
ಬೆಂಗಳೂರು:ಅಡಕೆ ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಪ್ರ ತ್ಯೇಕ ಅಡಕೆ ಮಂಡಳಿ ಸ್ಥಾಪಿಸಬೇಕೆಂಬ ರಾಜ್ಯದ ಬೆಳೆಗಾರರ ಬೇಡಿಕೆಗೆ ಕೇಂದ್ರ ಸರಕಾರ ತಣ್ಣೀರೆರೆಚಿದೆ.

ರಾಜ್ಯದಲ್ಲಿಅಡಕೆ ಮಂಡಳಿ ರಚಿಸುವ ಅಗತ್ಯವಿಲ್ಲಎಂದು ಕೇಂದ್ರ ಸರಕಾರ ರಾಜ್ಯ ತೋಟಗಾರಿಕೆ ಇಲಾಖೆಗೆ ಪತ್ರ ಬರೆದಿದೆ. ಬೆಲೆ ನಿಗಧಿ, ರೋಗ ನಿಯಂತ್ರಣ, ನಷ್ಟ ಪರಿಹಾರ ನೀಡುವುದಕ್ಕಾಗಿ ಸಂಕಷ್ಟ ಸಮಯದಲ್ಲಿ ಬೆಳೆಗಾರರ ನೆರವಿಗೆ ಧಾವಿಸುವ ಉದ್ದೇಶದಿಂದ ರಾಷ್ಟ್ರೀಯ ಮಟ್ಟದಲ್ಲಿಅಡಕೆ ಮಂಡಳಿ ತೆರೆಯಬೇಕು ಎಂಬುದು ರಾಜ್ಯದ ಬೆಳೆಗಾರರ ಒತ್ತಾಯವಾಗಿತ್ತು. ಹೀಗಾಗಿ, ಅಡಕೆ ಬೆಳೆಯುವ ಪ್ರಮುಖ ಜಿಲ್ಲೆಗಳ ಪ್ರತಿನಿಧಿಗಳು ಅಡಕೆಗೆ ಪ್ರತ್ಯೇಕ ಮಂಡಳಿ ಸ್ಥಾಪಿಸುವಂತೆ ವಿಧಾನಮಂಡಲದ ಅಧಿವೇಶನದಲ್ಲಿಯೂ ಚರ್ಚೆ ಮೂಲಕ ಗಮನಸೆಳೆದಿದ್ದರು. ಅದರಂತೆ 2019 ರಲ್ಲಿಅಂದಿನ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರು ಕೇಂದ್ರಕ್ಕೆ ಮನವಿ ಸಲ್ಲಿಸಿದ್ದರು.
ಈ ನಡುವೆ, ತೋಟಗಾರಿಕೆ ಇಲಾಖೆಯು ಅಡಕೆ ಮಂಡಳಿ ಸ್ಥಾಪನೆ ಸಂಬಂಧ ಹಲವು ರೂಪುರೇಷೆಗಳನ್ನು ರೂಪಿಸಿತ್ತು. ಮಂಡಳಿ ಸ್ಥಾಪನೆಯಾದರೆ ಅದಕ್ಕೆ ಅಧ್ಯಕ್ಷರ ನೇಮಕ, ಕಟ್ಟಡ ಮತ್ತು ಮೂಲ ಸೌಲಭ್ಯಗಳು, ಮುಖ್ಯವಾಗಿ ಆರಂಭಿಕ ನಿಧಿಯಾಗಿ ಸುಮಾರು 15 -20 ಕೋಟಿ ರೂ.ಗಳಷ್ಟು ಕೇಂದ್ರದಿಂದ ಅನುದಾನ ಪಡೆಯುವುದೂ ಸೇರಿದಂತೆ ನಾನಾ ಪ್ರಸ್ತಾವನೆಗಳ ಪೂರ್ವ ತಯಾರಿ ನಡೆಸಿತ್ತು. ಆದರೆ, ಇದೀಗ ಅಡಕೆ ಮಂಡಳಿ ಅಗತ್ಯವಿಲ್ಲಎಂದು ಕೇಂದ್ರ ಸರಕಾರ ಖಡಕ್ಕಾಗಿ ಪತ್ರ ಬರೆದಿರುವುದರಿಂದ ಮಂಡಳಿ ಸ್ಥಾಪನೆಯ ಕನಸು ಕಮರಿ ಹೋದಂತಾಗಿದೆ.
ಇತ್ತೀಚಿನ ದಿನಗಳಲ್ಲಿ ಎಲೆಚುಕ್ಕೆ, ಕೊಳೆ ರೋಗ ಮತ್ತು ಹಳದಿ ಎಲೆ ರೋಗವು ಅಡಕೆ ಬೆಳೆಗಾರರನ್ನು ತೀವ್ರವಾಗಿ ಬಾಧಿಸುತ್ತಿದೆ. ರಾಜ್ಯದಲ್ಲಿ ಸುಮಾರು 53,977 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿರುವ ಅಡಕೆ ಬೆಳೆಗೆ ಹಾನಿಯಾಗಿದೆ. ರೋಗ ಹರಡದಂತೆ ತಡೆಯುವುದಾಗಲಿ ಅಥವಾ ನಿಯಂತ್ರಣ ಮಾಡಬೇಕಾದ ಸರಕಾರಗಳು ಕೈ ಕಟ್ಟಿ ಕುಳಿತಿವೆ. ಇದೀಗ ಎಲ್ಲೆಡೆ ಅಡಕೆಯಲ್ಲಿ ಕ್ಯಾನ್ಸರ್ ಕಾರಕ ಅಂಶವಿದೆ ಎಂಬುದರ ಬಗ್ಗೆ ಪರ-ವಿರೋಧದ ಅಧ್ಯಯನಗಳು ಮತ್ತು ಚರ್ಚೆಗಳು ನಡೆಯುತ್ತಿವೆ. ಆದರೆ, ಬೆಳೆಗಾರರು ಆಥಿಕವಾಗಿ ಸಂಕಷ್ಟಕ್ಕೆ ಸಿಲುಕಿರುವುದರ ಬಗ್ಗೆ ಚರ್ಚೆಗಳು ನಡೆಯುತ್ತಿಲ್ಲ. ಕೊನೆ ಪಕ್ಷ ಅಡಕೆ ಮಂಡಳಿಯಾದರೂ ಇದ್ದಿದ್ದರೆ ಒಂದೇ ಸೂರಿನಡಿ ಹಲವು ಸಮಸ್ಯೆಗಳನ್ನು ಹೇಳಿಕೊಳ್ಳಬಹುದಿತ್ತು ಎಂಬುದು ಬೆಳೆಗಾರರ ಕೊರಗು.
ರಾಜ್ಯದಲ್ಲಿ ಅಡಕೆ ಬೆಳೆಯನ್ನು 6.89 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದು, 10.46 ಲಕ್ಷ ಮೆಟ್ರಿಕ್ ಟನ್ಗಳಷ್ಟು ಉತ್ಪಾದನೆಯಿದೆ. ಅಡಕೆ ಬೆಳೆಯನ್ನು ಪ್ರಮುಖವಾಗಿ ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಡಗು, ಉಡುಪಿ, ಚಿತ್ರದುರ್ಗ, ದಾವಣಗೆರೆ ಹಾಗೂ ಹಾಸನ ಜಿಲ್ಲೆಗಳಲ್ಲಿ ಬೆಳೆಯಲಾಗುತ್ತದೆ. ಅಡಕೆ ಬೆಳೆಯಲ್ಲಿಇತ್ತೀಚೆಗೆ ಎಲೆಚುಕ್ಕೆ, ಕೊಳೆ ರೋಗ ಹಾಗೂ ಹಳದಿ ರೋಗವು ಹೆಚ್ಚಾಗಿ ಬಾಧಿಸುತ್ತಿದ್ದು, ಬೆಳೆಗಾರರನ್ನು ಆರ್ಥಿಕವಾಗಿ ಸಂಕಷ್ಟಕ್ಕೆ ದೂಡಿದೆ.
ಕಳೆದ ವರ್ಷ ರಾಜ್ಯದಲ್ಲಿ ಸುಮಾರು 53,977 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿರುವ ಅಡಕೆ ಬೆಳೆಗೆ ಹಾನಿಯಾಗಿದೆ. ಅದೇ ರೀತಿ ಇತರೆ ನೆರೆ ಹೊರೆಯ ದೇಶಗಳಿಂದ ಕಳಪೆ ಗುಣಮಟ್ಟದ ಅಡಕೆ ಕಡಿಮೆ ಬೆಲೆಗೆ ನಮ್ಮ ದೇಶಕ್ಕೆ ಬರುತ್ತಿದ್ದು, ಅದನ್ನು ರಾಜ್ಯದಲ್ಲಿ ಉತ್ಪಾದಿಸುವ ಉತ್ತಮ ಗುಣಮಟ್ಟದ ಅಡಕೆಯೊಂದಿಗೆ ಬೆರೆಸುವುದರಿಂದ ಬೆಲೆ ಕುಸಿತವಾಗಿ ರೈತರು ಕಂಗಾಲಾಗಿದ್ದಾರೆ. ಹೀಗಾಗಿ ಸ್ಥಳೀಯ ಪ್ರತಿನಿಧಿಗಳು ಅಡಕೆ ಬೆಳೆಗಾರರ ಹಿತದೃಷ್ಟಿಯಿಂದ ಅಡಕೆಗೆ ಪ್ರತ್ಯೇಕಾಗಿ ಮಂಡಳಿ ಸ್ಥಾಪಿಸುವ ಪ್ರಧಿಸ್ತಾಪ ಮುಂದಿಟ್ಟಿದ್ದರು.
2019ರ ಡಿಸೆಂಬರ್ 12ರಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಕೃಷಿ ಕಲ್ಯಾಣ ಸಚಿವ ನರೇಂದ್ರಸಿಂಗ್ ತೋಮರ್ ಅವರಿಗೆ ಮನವಿ ಕೂಡ ಸಲ್ಲಿಸಲಾಗಿತ್ತು.
ರಾಷ್ಟ್ರೀಯ ಮಟ್ಟದಲ್ಲಿ ಮಂಗಳೂರಿನಲ್ಲಿ ಕ್ಯಾಂಪ್ಕೊ, ಕಾಸರಗೋಡಿನಲ್ಲಿ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ, ಅಡಕೆ ಮತ್ತು ಸಾಂಬಾರು ಬೆಳೆಗಳ ಅಭಿವೃದ್ಧಿ ನಿರ್ದೇಶನಾಲಯ ಹೀಗೆ ನಾನಾ ಸಂಸ್ಥೆಗಳು ಅಡಕೆ ಬೆಳೆಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸುತ್ತಿರುವುದರಿಂದ ಹೊಸದಾಗಿ ಪ್ರತ್ಯೇಕ ಅಡಕೆ ಮಂಡಳಿ ಸ್ಥಾಪನೆ ಅನಗತ್ಯವೆಂದು ರಾಜ್ಯಕ್ಕೆ ಪತ್ರ ಬರೆದು ತಿಳಿಸಿದೆ. ಹೀಗಾಗಿ, ಅಡಕೆ ಮಂಡಳಿ ಸ್ಥಾಪಿಸುತ್ತಿಲ್ಲಎಂದು ರಾಜ್ಯ ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ರಬ್ಬರ್, ಕಾಫಿ ಮತ್ತಿತರ ಬೆಳೆಗಳಿಗೆ ಮಂಡಳಿಯ ಅಗತ್ಯವಿತ್ತು. ಆದರೆ, ಅಡಕೆ ಸಂಬಂಧ ನಾನಾ ಕಾರ್ಯಗಳಿಗೆ ಕ್ಯಾಂಪ್ಕೊ, ತೋಟಗಾರ್ಸ್ ಸಂಘ ಸೇರಿದಂತೆ ಹಲವು ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಹೀಗಿರುವಾಗ ಮತ್ತೊಂದು ಮಂಡಳಿ ಸ್ಥಾಪನೆಯಿಂದ ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ ಎಂದು ಆರಗ ಜ್ಞಾನೇಂದ್ರ, ಮಾಜಿ ಅಧ್ಯಕ್ಷರು, ಅಡಕೆ ಕಾರ್ಯಪಡೆ ಹೇಳಿದ್ದಾರೆ.















Comments