top of page

ಬೆಂಗಳೂರು ಟ್ರಾಫಿಕ್ ಜಾಮ್ ಕೂಪ : ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಆರೋಪ

  • Writer: Ananthamurthy m Hegde
    Ananthamurthy m Hegde
  • Dec 7, 2024
  • 1 min read

ree

ಹೈದರಾಬಾದ್‌: ಕಲ್ಕತ್ತಾ ನಗರವು ಕಸದ ಗುಂಡಿ, ದಿಲ್ಲಿಯು ಮಾಲಿನ್ಯದ ನಗರಿ, ಬೆಂಗಳೂರು ವಾಹನ ದಟ್ಟಣೆ ಕೂಪ, ಚೆನ್ನೈ, ಮುಂಬಯಿ ಮಳೆ ನೀರಲ್ಲಿಮುಳುಗುವ ನಗರಗಳು ಎಂದು ವ್ಯಂಗ್ಯವಾಡಿರುವ ತೆಲಂಗಾಣ ಮುಖ್ಯಮಂತ್ರಿ ರೇವಂತ್‌ ರೆಡ್ಡಿ, ''ದೇಶದ ಮಹಾ ನಗರಗಳಿಗೆ ಹೋಲಿಕೆ ಮಾಡಿದರೆ ಎಲ್ಲಾ ನಿಟ್ಟಿನಿಂದಲೂ ಜನ ವಸತಿ ಹಾಗೂ ಹೂಡಿಕೆಗೆ ಹೈದರಾಬಾದ್‌ ಅತ್ಯುತ್ತಮ ನಗರ,'' ಎಂದು ವಿಶ್ಲೇಷಿಸಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಿಎಂ ರೇವಂತ್‌ ರೆಡ್ಡಿ, ''ದಿಲ್ಲಿಇಂದು ವಾಯು ಮಾಲಿನ್ಯದಿಂದ ನರಳುತ್ತಿದೆ. ಕೇಂದ್ರ ಸಚಿವರೇ ದಿಲ್ಲಿಗೆ ಹೋಗಲು ಹಿಂಜರಿಯುತ್ತಿದ್ದಾರೆ. ಪರಿಸ್ಥಿತಿ ತೀರ ಬಿಗಡಾಯಿಸುವ ಮಟ್ಟ ತಲುಪಿದೆ,'' ಎಂದು ಹೇಳಿದರು. ''ಐಟಿ ಸಿಟಿ ಎಂಬ ಖ್ಯಾತಿಯ ಬೆಂಗಳೂರು ವಾಹನ ಸಂಚಾರ ದಟ್ಟಣೆಗೆ ಹೆಸರಾಗಿದೆ. ಪ್ರತಿದಿನವೂ ಟ್ರಾಫಿಕ್‌ ಜಾಮ್‌ನಲ್ಲಿ ಜನ ನರಳುತ್ತಿದ್ದಾರೆ'' ಎಂದು ಹೇಳಿದ್ದಾರೆ.

ಚೆನ್ನೈ ಹಾಗೂ ಮುಂಬಯಿ ಮಹಾನಗರಗಳು ಮಳೆ ಬಂದರೆ ಮುಳುಗುತ್ತವೆ. ಬೋಟ್‌ಗಳಲ್ಲಿಓಡಾಡುವ ಸನ್ನಿವೇಶ ಕಂಡು ಬರುತ್ತದೆ. ಎಲ್ಲಾ ಮಹಾನಗರಗಳಿಗೆ ಹೋಲಿಸಿದರೆ ಹೈದರಾಬಾದ್‌ ವಾಸ ಯೋಗ್ಯ ಹಾಗೂ ಹೂಡಿಕೆ ಯೋಗ್ಯ ನಗರವಾಗಿದೆ. ಅಪಪ್ರಚಾರದ ಹೊರತಾಗಿಯೂ ರಿಯಲ್‌ ಎಸ್ಟೇಟ್‌ ಉದ್ಯಮ ಶೇ.29ರಷ್ಟು ಪ್ರಗತಿ ಸಾಧಿಸಿದೆ,'' ಎಂದು ರೆಡ್ಡಿ ಹೇಳಿದರು.

ಇದೇ ಮಾತುಗಳಲ್ಲಿ ಕೋಲ್ಕತಾ ನಗರವನ್ನು ತಿಪ್ಪೆ ಗುಂಡಿಗಳ ನಗರ ಎಂದು ಹೇಳಿರುವ ರೇವಂತ್ ರೆಡ್ಡಿ ವಿರುದ್ಧ ಪಶ್ಚಿಮ ಬಂಗಾಳದಲ್ಲಿ ಆಡಳಿತ ನಡೆಸುತ್ತಿರುವ ಟಿಎಂಸಿ ಕಟು ಶಬ್ದಗಳಲ್ಲಿ ಟೀಕಾಸ್ತ್ರ ಪ್ರಯೋಗಿಸಿದೆ. ಇದೊಂದು ದಡ್ಡತನದ ಹೇಳಿಕೆ ಎಂದು ಹೇಳಿರುವ ಟಿಎಂಸಿ ವಕ್ತಾರ ರಿಜು ದತ್ತಾ, "ಒಮ್ಮೆ ರೇವಂತ್ ರೆಡ್ಡಿಯವರು ಕಲ್ಕತ್ತಾಕ್ಕೆ ಬಂದು ನೋಡಲಿ. ಆಗ ಗೊತ್ತಾಗುತ್ತೆ, ನಮ್ಮೀ ನಗರ ಎಷ್ಟು ಕ್ಲೀನ್ ಆಗಿದೆ ಅಂತ'' ಎಂದು ಹೇಳಿದ್ದಾರೆ.

ಅತ್ತ, ಟಿಎಂಸಿಯ ರಾಜ್ಯಸಭಾ ಸದಸ್ಯರಾದ ಡೋಲಾ ಸೇನ್ ಕೂಡ ರೆಡ್ಡಿಯವರ ಮಾತುಗಳನ್ನು ಅಲ್ಲಗಳೆದಿದ್ದಾರೆ. "ರೇವಂತ್ ರೆಡ್ಡಿಯವರ ಇಂಥ ಬಾಲಿಶ ಹೇಳಿಕೆಗಳಿಗೆ ನಾವು ಪ್ರತಿಕ್ರಿಯೆ ನೀಡಬೇಕಿಲ್ಲ. ಆದರೆ, ರೇವಂತ್ ರೆಡ್ಡಿಯವರು ಒಮ್ಮೆ ಕಲ್ಕತ್ತಾಕ್ಕೆ ಬರಲಿ. ಆಗ ಅವರಿಗೇ ತಿಳಿಯುತ್ತದೆ ನಮ್ಮ ನಗರ ಎಷ್ಟು ಸ್ವಚ್ಛವಾಗಿದೆ ಹಾಗೂ ಎಷ್ಟು ಅಂದವಾಗಿದೆ ಎಂದು. ಕೋಲ್ಕತಾ ನಗರ ಕೇವಲ ಪಶ್ಚಿಮ ಬಂಗಾಳದಲ್ಲಿ ಮಾತ್ರವಲ್ಲ, ಇಡೀ ಭಾರತದ ಸ್ವಚ್ಛ ನಗರಿಗಳಲ್ಲೊಂದು'' ಎಂದು ಅವರು ಹೇಳಿದ್ದಾರೆ.

Comments


Top Stories

bottom of page