top of page

ದೆಹಲಿಯಲ್ಲಿ ಗ್ರೆನೇಡ್ ದಾಳಿಗೆ ಸಂಚು: ಇಬ್ಬರು ISI ಕಾರ್ಯಕರ್ತರ ಬಂಧನ

  • Writer: Ananthamurthy m Hegde
    Ananthamurthy m Hegde
  • Apr 21
  • 1 min read

ನವದೆಹಲಿ: ಪಾಕಿಸ್ತಾನ ಮೂಲದ ದರೋಡೆಕೋರ ಮತ್ತು ಐಎಸ್‌ಐ ವಕ್ತಾರ ಶಹಜಾದ್ ಭಟ್ಟಿ ಸೂಚನೆಯಂತೆ ಕೆಲಸ ಮಾಡುತ್ತಿದ್ದ ಇಬ್ಬರು ಭಾರತೀಯ ಐಎಸ್ಐ ಕಾರ್ಯಕರ್ತರನ್ನು ದೆಹಲಿ ಪೊಲೀಸರ ವಿಶೇಷ ತಂಡ ಮಂಗಳವಾರ ಬಂಧಿಸಿದೆ.

ಬಂಧಿತ ಆರೋಪಿಗಳು ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಗುಂಡಿನ ದಾಳಿ, ಗ್ರೆನೇಡ್ ದಾಳಿ ಮತ್ತು ಟಾರ್ಗೆಟೆಡ್ ಹತ್ಯೆಗಳನ್ನು ನಡೆಸಲು ಸಂಚು ರೂಪಿಸಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಮಧ್ಯಪ್ರದೇಶದ ಗ್ವಾಲಿಯರ್ ಮೂಲದ ರಾಜ್‌ವೀರ್ (21) ಮತ್ತು ವಿವೇಕ್ ಬಂಜಾರ(19) ಎಂದು ಗುರುತಿಸಲಾಗಿದೆ.

"ದೆಹಲಿ ಪೊಲೀಸರು ಇಬ್ಬರು ISI ಕಾರ್ಯಕರ್ತರನ್ನು ಬಂಧಿಸುವ ಮೂಲಕ ರಾಷ್ಟ್ರ ರಾಜಧಾನಿ ಮತ್ತು ಪಕ್ಕದ ಪ್ರದೇಶಗಳಲ್ಲಿ ಯೋಜಿತ ದಾಳಿಗಳನ್ನು ವಿಫಲಗೊಳಿಸಿದ್ದಾರೆ.

ಆರೋಪಿಗಳು ಸಾಮಾಜಿಕ ಮಾಧ್ಯಮಗಳ ಮೂಲಕ ಯುವಕರನ್ನು ಐಎಸ್ಐಗೆ ನೇಮಕ ಮಾಡಿಕೊಳ್ಳುತ್ತಿದ್ದರು ಮತ್ತು ದೆಹಲಿ-ಎನ್‌ಸಿಆರ್‌ನಲ್ಲಿ ಉದ್ದೇಶಿತ ಹಿಂಸಾಚಾರಕ್ಕೆ ಅವರನ್ನು ನಿಯೋಜಿಸುತ್ತಿದ್ದರು" ಎಂದು ಪೊಲೀಸ್ ಉಪ ಆಯುಕ್ತ(ವಿಶೇಷ ದಳ) ಪ್ರವೀಣ್ ಕುಮಾರ್ ತ್ರಿಪಾಠಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಪ್ರದೇಶದಲ್ಲಿ ಗ್ರೆನೇಡ್ ದಾಳಿ ಮತ್ತು ಟಾರ್ಗೆಟೆಡ್ ಹತ್ಯೆ ನಡೆಸುವ ಸಂಚಿನ ಬಗ್ಗೆ ಮಾಹಿತಿ ದೊರೆತ ನಂತರ ಮಾರ್ಚ್ 31 ರಂದು ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

"ವಿವೇಕ್ ಬಂಜಾರನನ್ನು ಮೊದಲು ಏಪ್ರಿಲ್ 16 ರಂದು ಗ್ವಾಲಿಯರ್‌ನ ದಾಬ್ರಾದಲ್ಲಿ ಪತ್ತೆಹಚ್ಚಿ ಬಂಧಿಸಲಾಯಿತು. ವಿಚಾರಣೆಯ ಸಮಯದಲ್ಲಿ, ಅವನು ತನ್ನ ಸಹಚರ ರಾಜ್‌ವೀರ್ ಬಗ್ಗೆ ಮಾಹಿತಿ ನೀಡಿದನು. ನಂತರ ಏಪ್ರಿಲ್ 18 ರಂದು ದೆಹಲಿಯ ಸರೈ ಕಾಲೇ ಖಾನ್ ಪ್ರದೇಶದಲ್ಲಿ ರಾಜ್‌ವೀರ್ ನನ್ನು ಬಂಧಿಸಲಾಯಿತು" ಎಂದು ಅಧಿಕಾರಿ ಹೇಳಿದ್ದಾರೆ.

Comments


Top Stories

bottom of page