top of page

ಬಿಜೆಪಿ ಬಣ ಬಡಿದಾಟಕ್ಕೆ ಬಿಳಲಿದೆಯಾ ಬ್ರೇಕ್ ?

Writer: Ananthamurthy m Hegde
Ananthamurthy m Hegde
Jan 4, 2025
2 min read

ರಾಜ್ಯ ಬಿಜೆಪಿ ಭಿನ್ನಮತಕ್ಕೆ ಬೀಳುತ್ತಾ ಬ್ರೇಕ್? ಹೌದು ಇಂತಹದೊಂದು ಕುತೂಹಲ ಕೆರಳಿಸಿದ್ದು ನಡ್ಡಾ ರಾಜ್ಯ ಪ್ರವಾಸ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಶುಕ್ರವಾರ ಬೆಂಗಳೂರಿನಲ್ಲಿದ್ದರು. ಬಿಜೆಪಿಯ ಹಲವು ರಾಜ್ಯ ನಾಯಕರು ಅವರನ್ನು ಭೇಟಿ ಮಾಡಿ ಮಾತುಕತೆಯನ್ನು ನಡೆಸಿದ್ದಾರೆ. ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ‘ಒಗ್ಗೂಡಿ ಕೆಲಸ ಮಾಡಿ’ ಎಂದು ಜೆಪಿ ನಡ್ಡಾ ಅವರು ಸೂಚನೆಗಳನ್ನು ನೀಡಿದ್ದಾರೆ. ಆದರೆ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಲು ರೆಬೆಲ್ ತಂಡ ಬಂದಿಲ್ಲ. ಈ ಕುರಿತಾದ ಮತ್ತಷ್ಟು ವಿವರ ಇಲ್ಲಿದೆ.


ರಾಜ್ಯ ಬಿಜೆಪಿಯ ಬಣ ರಾಜಕೀಯ ಬಡಿದಾಟ ಅಂತ್ಯ ಕಾಣುತ್ತಿಲ್ಲ. ಬಿಜೆಪಿ ರೆಬೆಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಕೇಂದ್ರ ಶಿಸ್ತು ಸಮಿತಿ ನೋಟಿಸ್ ಕೊಟ್ಟ ಬಳಿಕ ಬಣ ಗುದ್ದಾಟ ತಕ್ಕ ಮಟ್ಟಿಗೆ ಬಹಿರಂಗವಾಗಿ ತಣ್ಣಗಾದರೂ ಆತಂಕರಿಕವಾಗಿ ಇದು ಬುಸುಗುಡುತ್ತಲೇ ಇದೆ. ಯತ್ನಾಳ್ ಹಾಗೂ ವಿಜಯೇಂದ್ರ ತಂಡದ ನಡುವಿನ ಆಂತರಿಕ ಭಿನ್ನಮತ ಒಂದಲ್ಲಾ ಒಂದು ಸ್ವರೂಪದಲ್ಲಿ ಬಹಿರಂಗಗೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ಬಿಜೆಪಿ ಬಣ ತಿಕ್ಕಾಟಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಕೆಲವೊಂದು ಸೂಚನೆಗಳನ್ನು ನೀಡಿದ್ದಾರೆ.

  ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬೆಂಗಳೂರಿಗೆ ಆಗಮಿಸಿದ್ದ ಅವರು, ಕೆಕೆ ಗೆಸ್ಟ್‌ ಹೌಸ್‌ ನಲ್ಲಿ ವಿಶ್ರಾಂತಿ ಪಡೆದುಕೊಂಡಿದ್ದರು. ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್ ಅಶೋಕ್, ಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ಸೇರಿದಂತೆ ಬಿಜೆಪಿಯ ಪ್ರಮುಖ ನಾಯಕರು ಭೇಟಿ ಮಾಡಿ ಮಾತುಕತೆಯನ್ನು ನಡೆಸಿದ್ದಾರೆ. ರಾಜ್ಯ ಬಿಜೆಪಿಯ ವಾಸ್ತವ ಪರಿಸ್ಥಿತಿ, ಆಂತರಿಕ ಬಿಕ್ಕಟ್ಟು, ಸರ್ಕಾರದ ವಿರುದ್ಧ ನಡೆಸಲಾಗುತ್ತಿರುವ ಹೋರಾಟದ ಬಗ್ಗೆ ಗಮನ ಸೆಳೆದಿದ್ದಾರೆ.

ರಾಜ್ಯ ಬಿಜೆಪಿಯಲ್ಲಿರುವ ಭಿನ್ನಮತದ ಹಿನ್ನೆಲೆಯಲ್ಲಿ ಜೆಪಿ ನಡ್ಡಾ ಕೆಲವೊಂದು ಸೂಚನೆಗಳನ್ನು ನೀಡಿದ್ದಾರೆ. ರಾಜ್ಯದಲ್ಲಿ ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕೆಂದು ಎಂದು ತಮ್ಮನ್ನು ಭೇಟಿಯಾಗಿದ್ದ ರಾಜ್ಯ ನಾಯಕರುಗಳಿಗೆ ಸೂಚನೆ ನೀಡಿದ್ದಾರೆ.

ರಾಜ್ಯದಲ್ಲಿ ಪಕ್ಷ ಸಂಘಟನೆಯ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿರುವ ಅವರು, ವಿರೋಧ ಪಕ್ಷವಾಗಿ ಯಾವ ರೀತಿಯಲ್ಲಿ ಕೆಲಸ ಮಾಡುತ್ತಿದ್ದಿರಿ ಎಂಬ ವಿವರವನ್ನು ಪಡೆದುಕೊಂಡಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ಪ್ರತ್ಯೇಕವಾಗಿ ಕರೆದು ಮಾತನಾಡಿ, ಮಾಹಿತಿಯನ್ನು ಸಂಗ್ರಹ ಮಾಡಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಹಾಗೂ ಅದರಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆಯೂ ರಾಜ್ಯ ಬಿಜೆಪಿ ನಾಯಕರು ನಡ್ಡಾ ಬಳಿ ವಿವರಗಳನ್ನು ಹಂಚಿಕೊಂಡಿದ್ದಾರೆ. ರಾಜ್ಯ ನಾಯಕರುಗಳ ದೂರು, ದುಮ್ಮಾನಗಳನ್ನು ಆಲಿಸಿರುವ ಜೆಪಿ ನಡ್ಡಾ, ಸಮಸ್ಯೆಗಳನ್ನು ಬಗೆಹರಿಸಿಕೊಂಡು ಒಗ್ಗಟ್ಟಿನಿಂದ ಪಕ್ಷ ಸಂಘಟನೆ ಮಾಡುವಂತೆ ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಇದೇ ಸಂದರ್ಭದಲ್ಲಿ ಭಿನ್ನರ ಗುಂಪು ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿಲ್ಲ. ಯತ್ನಾಳ್ ನೇತೃತ್ವದಲ್ಲಿ ರೆಬೆಲ್ ತಂಡ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಈ ತಂಡ ಭೇಟಿ ಮಾಡಿಲ್ಲ. ಒಟ್ಟಿನಲ್ಲಿ ಬಿಜೆಪಿಯ ಭಿನ್ನಾಭಿಪ್ರಾಯಕ್ಕೆ ಜೆಪಿ ನಡ್ಡಾ ಸಲಹೆಯಿಂದ ಪರಿಹಾರ ಸಿಗುತ್ತಾ? ಅಥವಾ ಇದು ಮುಂದುವರಿಯುತ್ತಾ? ಕಾದು ನೋಡಬೇಕಾಗಿದೆ.

Comments


Top Stories

1/322
bottom of page