ಭಟ್ಕಳದಲ್ಲಿ ಶ್ರೀದೇವಿಯ ಮರದ ಗೊಂಬೆ ನಾಪತ್ತೆ
- Ananthamurthy m Hegde
- Dec 25, 2024
- 2 min read
ಭಟ್ಕಳ: ತಾಲೂಕಿನ ವಿವಾದಿತ ಸ್ಥಳವಾದ ಮುರಿನಕಟ್ಟೆಯಲ್ಲಿ ಶ್ರೀ ಮಾರಿಕಾಂಬೆ ಅಮ್ಮನರ ಹೊರೆ ತೆಗೆಯುವ ವೇಳೆ ಅಲ್ಲಿದ್ದ ಶ್ರೀ ದೇವಿಯ ಮರದ ಗೊಂಬೆ ನಾಪತ್ತೆಯಾಗಿದೆ ಎಂದು ಸ್ಥಳೀಯರು ಆರೋಪಿದ್ದು ಕೆಲಕಾಲ ಆತಂಕದ ವಾತಾವರಣ ಸ್ರಷ್ಟಿಯಾದ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಕೆಲ ದಿನಗಳ ಹಿಂದಷ್ಟೇ ಆಸರಕೇರಿ ಭಾಗದ ಹಿಂದೂ ಬಾಂದವರು ಭಟ್ಕಳ ಅರ್ಬನ್ ಬ್ಯಾಂಕ್ ಸಮೀಪದ ವನದುರ್ಗಿ ದೇವಸ್ಥಾನದ ಬಳಿ ಇದ್ದ ಅಮ್ಮನ ಹೊರೆ ಹಾಗೂ ಶಂಸುದ್ದಿನ್ ಸರ್ಕಲ್ ಬಳಿ ಇದ್ದ ದೇವಿಯ 2 ಅಮ್ಮನವರ ಗೊಂಬೆಯನ್ನು ಮುರಿನಕಟ್ಟೆಗೆ ಸಾಗಿಸಿ ಬಳಿಕ ದೇವಿಯ ಮರದ ಗೊಂಬೆಗೆ ಪೂಜೆ ಸಲ್ಲಿಸಿದ ಬಂದಿದ್ದರು.
ಮಂಗಳವಾರ ರಾತ್ರಿ ಕಾರ್ಗದ್ದೆ ,ಹುರುಳಿಸಾಲ, ಕಡವಿನಕಟ್ಟೆ ಹಾಗೂ ರಂಗಿನಕಟ್ಟೆಯ ಗ್ರಾಮಸ್ಥರು ಮುರಿನಕಟ್ಟೆಯಲ್ಲಿದ್ದ ಅಮ್ಮನವರ ಹೊರೆಯನ್ನು ವೆಂಕಟಾಪುರ ಗಡಿ ಭಾಗಕ್ಕೆ ಸಾಗಿಸಲೆಂದು ಬಂದ ವೇಳೆ ಮುರಿನಕಟ್ಟೆಯಲ್ಲಿದ್ದ 2 ದೇವಿಯ ಮರದ ಗೊಂಬೆಗೆ ಕಾಣಿಯಾಗಿರುವುದು ಗಮನಕ್ಕೆ ಬಂದಿದೆ. ಬಳಿಕ ಈ ವಿಷಯ ಎಲ್ಲಾ ಕಡೆ ಹರಡಿ ಸ್ಥಳಕ್ಕೆ ನೂರಾರು ಮಂದಿ ಜಮಾವಣೆಗೊಂಡು ಕೆಲ ಕಾಲ ಆತಂಕ ಸ್ರಷ್ಟಿಯಾಯಿತು. ತಕ್ಷಣ ಕಾರ್ಯ ಪ್ರವೃತ್ತರಾದ ಭಟ್ಕಳ ನಗರ ಹಾಗೂ ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ಬಂದು ಸ್ಥಳ ಪರಿಶೀಲನೆ ಮಾಡಿದರು. ರಾತ್ರಿಯಾದ ಕಾರಣ ಸ್ಥಳದಲ್ಲಿ ಗಿಡಗಂಟಿಗಳು ಬೆಳೆದುಕೊಂಡಿರುವುದರಿಂದ ಪರಿಶೀನೆ ಮಾಡಲು ಕಷ್ಟವಾಗಿದ್ದು ಗುರುವಾರ ಬೆಳ್ಳಿಗ್ಗೆ ಸರಿಯಾದ ರೀತಿಯಲ್ಲಿ ಸ್ಥಳ ಪರಿಶೀಲನೆ ಮಾಡುತ್ತೇವೆ ಎಂದು ಅಲ್ಲಿ ನೆರೆದಿದ್ದ ಹಿಂದೂ ಮುಖಂಡರಿಗೆ ಹೇಳಿದರು.
ಬಳಿಕ ಕೆಲ ಕಾಲ ಸ್ಥಳೀಯರಿಗೂ ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಪೊಲೀಸರು ಈ ಬಗ್ಗೆ ನೀವು ಪ್ರಕರಣ ದಾಖಲು ಮಾಡಿ. ನಾವು ಈ ಬಗ್ಗೆ ತನಿಖೆಕೈಗೊಳ್ಳುತ್ತೇವೆ ಎಂದು ಹೇಳಿದರು.
ಬಳಿಕ ಅಲ್ಲಿದ್ದ ಹಿಂದೂ ಮುಖಂಡರಾದ ಗೋಂವಿದ ನಾಯ್ಕರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ದೂರವಾಣಿ ಕರೆ ಮಾಡಿ ಈ ಬಗ್ಗೆ ಸೂಕ್ತವಾಗಿ ತನಿಖೆ ಮಾಡಿ ಒಂದು ವಾರದೊಳಗಾಗಿ ಪ್ರಕರಣ ಇತ್ಯರ್ಥ ಮಾಡುತ್ತೇವೆ ಎಂದು ಹೇಳಿದರು. ಬಳಿಕ ಗೋವಿಂದ ನಾಯ್ಕ ಜಮಾವಣೆಗೊಂಡ ಹಿಂದೂ ಬಾಂಧವರಿಗೆ ಈ ಬಗ್ಗೆ ಮಾಹಿತಿ ನೀಡಿ ಮನವಳಿಸಲು ಯಶಸ್ವಿಯಾದರು.
ಬಳಿಕ ಸ್ಥಳೀಯರು ಅಲ್ಲಿಂದ ಅಮ್ಮನರ ಹೊರೆಯನ್ನು ವಾಹನದಲ್ಲಿ ತುಂಬಿಕೊಂಡು ವೆಂಕಟಾಪುರ ಗಡಿಭಾಗಕ್ಕೆ ತಲುಪಿಸಿದರು.
ಈ ಸಂದರ್ಭದಲ್ಲಿ ಹಿಂದೂ ಮುಖಂಡರಾದ ಗೋವಿಂದ ನಾಯ್ಕ ಮಾತನಾಡಿ ಮಾರಿ ಹೊರೆಯನ್ನು ತೆಗೆಯುವುದು ಸಂಪ್ರದಾಯವು ತಲತಲಾಂತರದಿಂದ ನಡೆದುಕೊಂಡು ಬಂದಿದೆ. ಈ ಭಾಗದಿಂದ ಹೊರಡುವ ಅಮ್ಮನ ಹೊರೆ ಶಿರಸಿ ಮಾರಿಕಾಂಬಾ ದೇವಸ್ಥಾನಕ್ಕೆ ಹೋಗಿ ತಲುಪುತ್ತದೆ. ತಾಲೂಕಿನ ಎಲ್ಲಾ ಕಡೆಗಳಿಂದ ಬರುವ ಅಮ್ಮನ ಮುರಿನಕಟ್ಟೆಗೆ ಬಂದು ಅಲ್ಲಿಂದ ಮುಂದೆ ಸಾಗಿಸಲಾಗುತ್ತದೆ. ಈಗ ಇಲ್ಲಿ ಇದ್ದ 2 ಗೊಂಬೆ ನಾಪತ್ತೆಯಾಗಿದ್ದು ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ. ಇಷ್ಟು ವರ್ಷದಿಂದ ಇಲ್ಲವಾದ ಅನಾಹುತ ಈಗ ಆಗಿದೆ. ಬಗ್ಗೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ನನ್ನೊಂದಿಗೆ ಮಾತನಾಡಿ ಒಂದು ವಾರ ಕಾಲಾವಕಾಶ ಕೊಟ್ಟು, ನಾವೆಲ್ಲ ಸೇರಿ ಇದಕ್ಕೂ ಕಾಯಂ ಪರಿಹಾರ ಹುಡುಕ ಬೇಕು. ನನ್ನ ಮೇಲೆ ವಿಶ್ವಾಸವಿಡಿ ಎಂದು ಹೇಳಿದಕ್ಕೆ ನಾವು ಈಗ ಶಾಂತರಾಗಿದ್ದೇವೆ ಎಂದರು.
ಈ ವೇಳೆ ಗ್ರಾಮೀಣ ಠಾಣೆಯ ಸಿಪಿಐ ಚಂದನ ಗೋಪಾಲ ಹಾಗೂ ನಗರ ಮತ್ತು ಗ್ರಾಮೀಣ ಠಾಣೆಯ ಪಿ.ಎಸ್.ಐ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
Comments