top of page

ಮಾನವ ನೀ ಬದಲಾಗು ಎನ್ನುವ ಯುಐ

  • Writer: Ananthamurthy m Hegde
    Ananthamurthy m Hegde
  • Dec 23, 2024
  • 2 min read

ಉಪೇಂದ್ರ ಅವರ 'ಎ' ಸಿನಿಮಾ ಮಾಡಿದಾಗ, ಅದರ ಪೋಸ್ಟರ್‌ನಲ್ಲಿ ಹೀಗೊಂದು ಲೈನ್‌ ಹಾಕಿಸಿದ್ದರು. "ಇದು ಕಡ್ಡಾಯವಾಗಿ ಬುದ್ಧಿವಂತರಿಗೆ ಮಾತ್ರ". ಆ ಲೈನೇ ಸಿನಿಪ್ರಿಯರಿಗೆ ಭಾರಿ ತಲೆಕೆಡಿಸಿತ್ತು. ಇದೀಗ ಉಪ್ಪಿ 'ಯುಐ' ಸಿನಿಮಾ ಮಾಡಿದ್ದಾರೆ. ಆದರೆ ಈ ಬಾರಿ ಸಿನಿಮಾ ಶುರುವಾಗುವ ಮುನ್ನವೇ ಒಂದು ಲೈನು ಕಾಣಿಸುತ್ತದೆ. "ನೀವು ಬುದ್ಧಿವಂತರಾಗಿದ್ರೆ ಈಗಲೇ ಚಿತ್ರಮಂದಿರದಿಂದ ಎದ್ದೋಗಿ". ಅಲ್ಲಿಗೆ 25 ವರ್ಷವಾದರೂ ಉಪೇಂದ್ರ ಸ್ಟೈಲ್ ಬದಲಾಗಿಲ್ಲ ಅಂತ ಅನ್ನಿಸುತ್ತದೆ.

ಆದರೆ, 'ಎ' ಸಿನಿಮಾದಲ್ಲಿ ಪೋಷಕರನ್ನು ಉಪ್ಪಿ ಶೂಟ್ ಮಾಡಿ ಸಾಯಿಸುತ್ತಾರೆ. ಅಪ್ಪ-ಅಮ್ಮನನ್ನು ಕಳೆದುಕೊಂಡ ಮಗು ಅಳುತ್ತ ನಿಂತಿರುತ್ತಾನೆ. ಆಗ ಉಪೇಂದ್ರ, "ಹೋಗು ಈ ಪ್ರಪಂಚ ವಿಶಾಲವಾಗಿದೆ.." ಎಂದು ಹೇಳುತ್ತಾರೆ. ಅಳುತ್ತಿದ್ದ ಮಗು, ಅಲ್ಲಿಂದ ಓಡಿ ಹೋಗುತ್ತಾನೆ. ಆಗ ಉಪೇಂದ್ರ, "ಇವ್ನು ಓಡೋ ಸ್ಪೀಡ್ ನೋಡಿದ್ರೆ ಮುಂದೆ ಸುಭಾಷ್ ಚಂದ್ರ ಬೋಸ್ ಆಗ್ತಾನೆ" ಅಂತ ಹೇಳ್ತಾರೆ. 'ಯುಐ' ಸಿನಿಮಾದಲ್ಲೂ ಅದೇ ರೀತಿ ಅಳುತ್ತಾ ನಿಲ್ಲುವ ಒಂದು ಮಗುವಿಗೆ ಉಪ್ಪಿ ಓಡು ಎಂದು ಹೇಳುತ್ತಾರೆ. ಮಗು ಓಡಿಹೋಗುತ್ತದೆ. ಆಗ ಉಪೇಂದ್ರ, "ಇವ್ನು ಓಡೋ ಸ್ಪೀಡ್ ನೋಡಿದ್ರೆ ಮುಂದೆ ಒಸಮಾ ಬಿನ್ ಲಾಡೆನ್, ದಾವೂದ್ ಇಬ್ರಾಹಿಂ ಆಗ್ತಾನೆ.." ಅಂತ ಹೇಳ್ತಾರೆ. ಅರೇ, ಇಲ್ಯಾಕೋ ಉಪೇಂದ್ರ ಬದಲಾಗಿರುವಂತೆ ಕಾಣ್ತಿದ್ದರಲ್ಲಾ ಅಂತ ಅನ್ನಿಸಿದ್ರೆ, ಅದಕ್ಕುತ್ತರ 'ಯುಐ'!

'ಉಪ್ಪಿ 2' ಆದ್ಮೇಲೆ ನಿರ್ದೇಶಕನಾಗಿ ಸತತ 8-9 ವರ್ಷ ಗ್ಯಾಪ್ ಮಾಡಿದ್ದ ಉಪೇಂದ್ರ, ಈಗ 'ಯುಐ' ಸಿನಿಮಾವನ್ನು ತೆರೆಗೆ ತಂದಿದ್ದಾರೆ. ಸಿನಿಮಾ ಘೋಷಣೆ ಆದಾಗಿನಿಂದ ಟೈಟಲ್, ಕಂಟೆಂಟ್ ಎಲ್ಲದರ ಬಗ್ಗೆಯೂ ಕುತೂಹಲವಿತ್ತು. ಆದರೆ ಚಾಲಾಕಿ ಉಪ್ಪಿ ಮಾತ್ರ, ಸಣ್ಣ ಸುಳಿವನ್ನೂ ನೀಡದೇ ಸಿನಿಮಾವನ್ನು ಥಿಯೇಟರ್‌ ಅಂಗಳಕ್ಕೆ ತಂದುಬಿಟ್ಟಿದ್ದಾರೆ. ಚಿತ್ರಕಥೆ ವಿಚಾರದಲ್ಲಿ ಹಿಂದಿನ ಸಿನಿಮಾಗಳಿಗಿಂತ ಭಾರಿ ಬದಲಾವಣೆ ಮಾಡಿಕೊಂಡಿರುವ ಉಪ್ಪಿ, ಈ ಬಾರಿ ಪಾತ್ರಗಳಿಗಿಂತ ರೂಪಕಗಳಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಪ್ರಜಾಕೀಯದ ವಿಚಾರಗಳನ್ನು ಕೂಡ ಸೂಕ್ಷ್ಮವಾಗಿ ಚಿತ್ರಕಥೆಯೊಳಗೆ ತಂದಿದ್ದಾರೆ ಉಪ್ಪಿ. ಹೀಗೆ ಸಾಕಷ್ಟು ಬದಲಾಗಿರುವ ಉಪ್ಪಿಯ ದರ್ಶನ ಇಲ್ಲಿ ಆಗುತ್ತದೆ.

ಏನೇ ತಿರುಗುಮುರುಗ ಹೇಳಿದರೂ 'ಯುಐ' ಸಿನಿಮಾದ ಕಥೆಯನ್ನು ಸರಳವಾಗಿ ಹೇಳುವುದಕ್ಕೆ ಆಗೋದಿಲ್ಲ. ಒಂದುವೇಳೆ, ಯಾರಾದರೂ ಕಥೆಯನ್ನು ಅರ್ಥ ಮಾಡಿಕೊಂಡು, ಕಾನ್ಫಿಡೆಂಟ್ ಆಗಿ ಎದುರಿಗೆ ಇರುವವರಿಗೆ ಹೇಳಿದರೂ, ಕೇಳಿಸಿಕೊಂಡವನ ತಲೆಗೆ ಹುಳ ಬಿಟ್ಟುಕೊಂಡಂತೆ ಆಗಿರುತ್ತದೆ ಹೊರತು ಅರ್ಥವಾಗಿರುವುದಿಲ್ಲ. ಅಷ್ಟೊಂದು ಸುರಳಿ ಸುರಳಿಯಾಗಿದೆ ಉಪೇಂದ್ರ ಬರವಣಿಗೆ!

'ಆಡು ಮುಟ್ಟದ ಸೊಪ್ಪಿಲ್ಲ..' ಎಂಬ ಗಾದೆ ಮಾತಿನಂತೆ ಈ ಸಿನಿಮಾದಲ್ಲಿ ಉಪೇಂದ್ರ ಹೇಳದೇ ಇರುವ ವಿಚಾರಗಳೇ ಇಲ್ಲ. ದೇವರು, ಜಾತಿ, ಧರ್ಮ, ಪ್ರಕೃತಿ, ಸಮಾಜ, ಮಹಿಳೆ, ಬುದ್ಧ, ಬಸವ, ಭ್ರಷ್ಟಾಚಾರ, ಕಲ್ಕಿ ಯುಗ & ಸತ್ಯ ಯುಗ, ಭವಿಷ್ಯ.. ಕೊನೆಗೆ ಸಾಮಾಜಿಕ ಜಾಲತಾಣಗಳನ್ನೂ ಕೂಡ ಉಪ್ಪಿ ಬಿಟ್ಟಿಲ್ಲ. ಇಡೀ ಸಿನಿಮಾದಲ್ಲಿ ಇವೆಲ್ಲವೂ ಒಂದಲ್ಲಾ ಒಂದು ಕಡೆ ಬಂದು ತಮ್ಮ ಇರುವಿಕೆಯನ್ನು ತೋರಿಸಿಕೊಟ್ಟು ಹೋಗುತ್ತವೆ. ಆದರೆ ಇಷ್ಟೆಲ್ಲಾ ವಿಷಯಗಳನ್ನು ಟಚ್ ಮಾಡಿರುವ ಉಪ್ಪಿಗೆ ಅದರ ಆಳವನ್ನು 'ಫೋಕಸ್' ಮಾಡುವುದಕ್ಕೆ ಆಗಿಲ್ಲ ಅಥವಾ ಕಂಟೆಂಟ್ ಜಾಸ್ತಿ ಆಗಿ ಅದಕ್ಕೆ ಸಿಗಬೇಕಾದ ಟ್ರೀಟ್‌ಮೆಂಟ್ ಕಮ್ಮಿ ಆಯಿತೇ ಎಂದು ಅನಿಸುತ್ತದೆ.

ಉಪೇಂದ್ರ ಅವರ 'ಶ್‌' ಮತ್ತು 'ಎ' ಸಿನಿಮಾಗಳಲ್ಲಿ ಒಂದು ವಿಚಾರ ಕಾಮನ್ ಆಗಿತ್ತು. ಅದೇನೆಂದರೆ, ಸಿನಿಮಾದ ಒಳಗೆ ಒಂದು ಸಿನಿಮಾ. ಅದೇ ರೀತಿ ಪ್ರಯತ್ನ ಇಲ್ಲೂ ಆಗಿದೆ. ಇಲ್ಲೂ ಕೂಡ ಸಿನಿಮಾದೊಳಗೆ ಒಂದು ಸಿನಿಮಾ ನಡೆಯುತ್ತದೆ. ಸಿನಿಮಾ ಆಂಗಲ್‌ನಲ್ಲಿ ಬರುವ ಅಷ್ಟೂ ದೃಶ್ಯಗಳಿಗೆ ಬೇರೆಯದೇ ಟಚಪ್ ನೀಡಿರುವ ಉಪ್ಪಿ, ಅದಕ್ಕಾಗಿ ಬೇರೆಯದೇ ಲೋಕವನ್ನೇ ಸೃಷ್ಟಿ ಮಾಡಿದ್ದಾರೆ. ಆ ತಂತ್ರಜ್ಞಾನ ಇಷ್ಟವಾಗುತ್ತದೆ. ಅದಕ್ಕಾಗಿ ಛಾಯಾಗ್ರಹಕ ಎಚ್ ಸಿ ವೇಣು, ಡಿಐ ಟೀಮ್, ಸಂಕಲನಕಾರಿಗೆ ಮೆಚ್ಚುಗೆ ಹೇಳಬೇಕು. ಅಜನೀಶ್ ಲೋಕನಾಥ್ ಅವರ ಹಿನ್ನೆಲೆ ಸಂಗೀತ ಚೆನ್ನಾಗಿದೆ. ಸಿನಿಮಾದ ಅವಧಿ ಚಿಕ್ಕದಾಗಿ ಚೊಕ್ಕದಾಗಿದೆ.

ಹಾಗೆಯೇ, ಈ ಸಿನಿಮಾದಲ್ಲಿ ಏನಿಲ್ಲ ಅನ್ನೋದನ್ನು ನೋಡುವುದಾದರೆ, ಇಲ್ಲಿ ಎಂಟರ್‌ಟೇನ್‌ಮೆಂಟ್ ಅಂಶಗಳು ಕಮ್ಮಿ ಇವೆ. 'ಸಮುದ್ರದ ನೆಂಟಸ್ತನ ಉಪ್ಪಿಗೆ ಬಡತನ' ಅನ್ನೋ ಹಾಗೇ ಸಾಧು ಕೋಕಿಲ ಇದ್ದರೂ ನಗುವಿಗೆ ಕೊರತೆ ಇದೆ. ರೀಷ್ಮಾ ನಾಣಯ್ಯ ನಿಭಾಯಿಸಿರುವ ನಾಯಕಿ ಪಾತ್ರಕ್ಕೂ ಜಾಸ್ತಿ ಸ್ಕೋಪ್ ಇಲ್ಲ.

ನಟ ಉಪೇಂದ್ರ ಅವರಿಗೆ ಇಲ್ಲಿ ಸತ್ಯ ಮತ್ತು ಕಲ್ಕಿ ಎಂಬ ಎರಡೂ ಪಾತ್ರಗಳಿವೆ. ಅವೆರಡನ್ನೂ ಅವರಿಲ್ಲಿ ಉತ್ತಮವಾಗಿಯೇ ನಿಭಾಯಿಸಿದ್ದಾರೆ. ಆ ಎರಡೂ ಪಾತ್ರಗಳ ಮಧ್ಯೆ ಒಂದು ಭಿನ್ನತೆ ಇರಬೇಕು ಎಂಬ ಕಾರಣಕ್ಕೆ ಮ್ಯಾನರಿಸಂ ಬದಲಾಯಿಸಿಕೊಂಡು ನಟಿಸಿದ್ದಾರೆ. ಕಾಸ್ಟ್ಯೂಮ್‌ ಕೂಡ ಭಿನ್ನವಾಗಿದೆ. ಇವೆರಡು ಪಾತ್ರಗಳ ಜೊತೆಗೆ ಸಿನಿಮಾದ ಕೊನೆಯಲ್ಲಿ ಮತ್ತೊಂದು ರೂಪದಲ್ಲೂ ಉಪ್ಪಿ ದರ್ಶನ ನೀಡಿದ್ದಾರೆ. ಸಿನಿಮಾ ವಿಮರ್ಶಕನ ಪಾತ್ರದಲ್ಲಿ ಮುರಳಿ ಶರ್ಮಾ ಆರಂಭ ಮತ್ತು ಅಂತ್ಯದಲ್ಲಿ ಬಂದುಹೋಗುತ್ತಾರೆ. ಇದರ ಜೊತೆಗೆ ಕನ್ನಡದ ಹಲವು ಕಲಾವಿದರು ಬಣ್ಣ ಹಚ್ಚಿದ್ದಾರೆ. ಆದರೆ ಎಲ್ಲರಿಗೂ ಒಂದೆರಡು ದೃಶ್ಯಗಳಿವೆ ಮಾತ್ರ. 'ಆರ್ಮುಗ' ರವಿಶಂಕರ್ ಅವರ ಪಾತ್ರವು ರಾಜಕೀಯವನ್ನು ಪ್ರತಿನಿಧಿಸುತ್ತದೆ. ಅದನ್ನವರು ಉತ್ತಮವಾಗಿ ನಿಭಾಯಿಸಿದ್ದಾರೆ.

ಒಟ್ಟಿನಲ್ಲಿ 'ಯುಐ' ಸಿನಿಮಾ ಪ್ರೇಕ್ಷಕನನ್ನು ರಂಜಿಸುವ ಬದಲು, ಆಲೋಚಿಸುವಂತೆ ಮಾಡುತ್ತದೆ. 'ಮಾನವ ನೀ ಬದಲಾಗು..' ಎಂದು ಕೂಗಿ ಕೂಗಿ ಹೇಳುತ್ತದೆ. ಒಂದು ವೇಳೆ ಸಿನಿಮಾ ಅರ್ಥವಾಗದೇ ಇದ್ದರೆ, 'ಇನ್ನೊಮ್ಮೆ ಥಿಯೇಟರ್‌ಗೆ ಬಾ..' ಎಂದು ಕೂಗಿ ಕೂಗಿ ಕರೆಯುತ್ತದೆ!

Comments


Top Stories

bottom of page