top of page

ರಾಜ್ಯಮಟ್ಟದ ಹೊನಲು ಬೆಳಕಿನ ಡೊಳ್ಳು ಕುಣಿತ ಸಂಪನ್ನ

Writer: Ananthamurthy m Hegde
Ananthamurthy m Hegde
Dec 1, 2024
1 min read

ಸಿದ್ದಾಪುರ : ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸಂಘಟನೆಯ ತಾಲೂಕು ಘಟಕದ ವತಿಯಿಂದ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಹಮ್ಮಿಕೊಂಡ ರಾಜ್ಯಮಟ್ಟದ ಹೊನಲುಬೆಳಕಿನ ಡೊಳ್ಳು ಕುಣಿತ ಸ್ಪರ್ಧೆ ಕಾರ್ಯಕ್ರಮ ಪಟ್ಟಣದ ನೆಹರೂ ಮೈದಾನದಲ್ಲಿ ಶನಿವಾರ ಸಂಜೆ ನಡೆಯಿತು.

ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ಕ್ಷೇತ್ರ ಮಹಾಕಾಳಿ ಮಹಾಸಂಸ್ಥಾನ ನಿಪ್ಪಾಣಿಯ ಶ್ರೀ ಅರುಣಾನಂದ ತೀರ್ಥ ಸ್ವಾಮೀಜಿ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಯುವ ಸಮುದಾಯ ತನ್ನ ಪರಂಪರೆಯ ಇಂಥ ಕಲೆಗಳನ್ನು ಅಭ್ಯಸಿಸಿ, ಮುಂದಿನ ತಲೆಮಾರಿಗೆ ತಲುಪಿಸುವ ಕಾರ್ಯ ಮಾಡಬೇಕು. ಆ ನಿಟ್ಟಿನಲ್ಲಿ ಇದೊಂದು ಹೆಜ್ಜೆಯಾಗಿದೆ, ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲದೆ ಜೀವ ಕಳೆದುಕೊಳ್ಳುತ್ತಿದ್ದಾರೆ ಆ ಹೋರಾಟ ಕ್ಕೆ ನನ್ನ ಬೆಂಬಲವಿದೆ ಶಾಸಕರು ಸರ್ಕಾರ ದೊಂದಿಗೆ ಮಾತನಾಡಿ ಆಸ್ಪತ್ರೆ ನಿರ್ಮಾಣ ಆಗುವಹಾಗೆ ಪ್ರಯತ್ನಿಸಲಿ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ವಕೀಲ, ಕಾಂಗ್ರೆಸ್ ಮುಖಂಡ ಜಿ.ಟಿ.ನಾಯ್ಕ ಮಣಕಿನಗುಳಿ ಮಾತನಾಡಿ ಇಂಥದೊಂದು ಅಪೂರ್ವ ಜಾನಪದ ಕಲೆಯ ಕುರಿತಾದ ಸ್ಪರ್ಧಾ ಕಾರ್ಯಕ್ರಮ ಆಯೋಜಿಸಿದ್ದು ಡೊಳ್ಳು ಕುಣಿತ ಕಲೆ ಮುಂದುವರಿಕೆಗೆ ಸಹಕಾರಿ. ಇಂಥ ಕಾರ್ಯಕ್ರಮಗಳಿಗೆ ನಾನು ಸದಾ ಪ್ರೋತ್ಸಾಹಿಸುತ್ತೇನೆ. ಈ ಕಾರ್ಯಕ್ರಮ ಆಯೋಜಿಸಿದ ಸಂಘಟನೆಯ ಕಾರ್ಯ ಮಹತ್ವದ್ದು ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಭೀಮಣ್ಣ ನಾಯ್ಕ ಮಾತನಾಡಿ ಡೊಳ್ಳು ಕುಣಿತ ನಮ್ಮ ತಾಯ್ನಾಡಿನ ಸಂಸ್ಕೃತಿ. ಇದು ಈ ನೆಲದ ಕಲೆ. ನಮ್ಮಲ್ಲಿ ಶೌರ್ಯವನ್ನು ತರುವ ನೃತ್ಯ, ವಾದನ ಎರಡೂ ಮೇಳೈಸಿದ ಜಾನಪದ ಕಲೆ. ಈ ಕಲೆಯನ್ನು ಮುಂದಿನ ತಲೆಮಾರು ಅಭ್ಯಸಿಸಿಕೊಂಡು ಹೋಗಬೇಕು. ಜಾನಪದ ಕಲೆಗಳನ್ನು ಪರಿಚಯಿಸುವ ಈ ಕಾರ್ಯಕ್ರಮ ಅಗತ್ಯವಾದದ್ದು ಎಂದರು.

ಜೆ.ಡಿ.ಎಸ್ ಮುಖಂಡ ಸೂರಜ ಸೋನಿ ಮಾತನಾಡಿ ಡೊಳ್ಳು ಕುಣಿತ ಚರ್ಮ ವಾದ್ಯ ಹೋಗಿ ಈಗ ಪ್ಲಾಸ್ಟಿಕ್ ವಾದ್ಯವಾಗಿದೆ. ಚರ್ಮ ವಾದ್ಯ ಅಸ್ತಿತ್ವವನ್ನು ಕಳೆದುಕೊಂಡಿದೆ. ಈ ಚರ್ಮ ವಾದ್ಯವನ್ನು ಚರ್ಮ ವಾದ್ಯವಾಗಿಯೇ ಉಳಿಸಬೇಕು ಅದು ನಮ್ಮ ಸಂಪ್ರದಾಯ. ಆದರೆ ಇದಕ್ಕೆ ಯಾಕೆ ಬಿಡುತ್ತಿಲ್ಲ ಗೊತ್ತಿಲ್ಲ ಹಾಗಾಗಬಾರದು ಸರ್ಕಾರವೇ ಇದಕ್ಕೆ ಸ್ಪೆಷಲ್ ನೋಟಿಫಿಕೇಶನ್ ಕೊಟ್ಟು ಚರ್ಮ ವಾದ್ಯವನ್ನು ಚರ್ಮ ವಾದ್ಯವನ್ನಾಗಿ ಇರಿಸಬೇಕು ಯಾಕೆಂದರೆ ಇದು ನಮ್ಮ ಸಂಪ್ರದಾಯ ಎಂದರು.

ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ಅನಂತಮೂರ್ತಿ ಹೆಗಡೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಡೊಳ್ಳು ಕುಣಿತ ಸ್ಪರ್ಧೆಯಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ತಂಡಗಳು ಆಗಮಿಸಿ ಕಲೆ ಪ್ರದರ್ಶಿದರು. ನೆರೆದ ಸಹಸ್ರ ಸಂಖ್ಯೆಯ ಅಭಿಮಾನಿ ಹಾಗೂ ಪ್ರೇಕ್ಷಕರ ರಂಜಿಸಿದರು. ಸ್ಪರ್ಧೆಯಲ್ಲಿ 27 ತಂಡಗಳು ಭಾಗವಹಿಸಿ ಬಿರಲಿಂಗೇಶ್ವರ ಡೊಳ್ಳಿನಸಂಘ ಅಂಬಾರಗೋಪ್ಪ ಶಿಕಾರಿಪುರ ಪ್ರಥಮ, ಸಿದ್ದೀವಿನಾಯಕ ಡೊಳ್ಳಿನ ಸಂಘ ಕೊಡಗಿಬೈಲ್ ಸಿದ್ದಾಪುರ ದ್ವಿತೀಯ, ಕನ್ನಡ ಜಾನಪದ ಕಲಾತಂಡ ಹೊಸಕೊಪ್ಪ ಸಾಗರ ತೃತೀಯ ಸ್ಥಾನ, ಉತ್ತಮ ತಾಳಗಾರ ವೆಂಕಟೇಶ್ವರ ಮಿತ್ರ ಮಂಡಳಿ ದೊಡ್ಮನೆ, ಉತ್ತಮ ಕುಣಿತ ಮಾಯಮ್ಮ ಡೊಳ್ಳಿನ ಸಂಘ ಶಿವಪುರ ತಂಡಗಳು ಪ್ರಶಸ್ತಿ ಪಡೆದುಕೊಂಡವು.

Comments


Top Stories

1/322
bottom of page