top of page

ಷರತ್ತುಗಳಿಗೆ BBMP ಒಪ್ಪಿಗೆ: ಪ್ರತಿಭಟನೆ ಕೈಬಿಟ್ಟ ಮಿಟ್ಟಗಾನಹಳ್ಳಿ ನಿವಾಸಿಗಳು

  • Writer: Ananthamurthy m Hegde
    Ananthamurthy m Hegde
  • Mar 16
  • 1 min read

ಬೆಂಗಳೂರು: ತಮ್ಮ ಷರತ್ತುಗಳಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಒಪ್ಪಿಗೆ ಸೂಚಿಸಿರುವ ಹಿನ್ನೆಲೆಯಲ್ಲಿ ಮಿಟ್ಟಗಾನಹಳ್ಳಿ ನಿವಾಸಿಗಳು ಪ್ರತಿಭಟನೆಯಿಂದ ದೂರ ಸರಿದಿದ್ದು, ಇದರ ಬೆನ್ನಲ್ಲೇ ಕಾಂಪ್ಯಾಕ್ಟರ್‌ಗಳಲ್ಲಿನ ತ್ಯಾಜ್ಯ ವಿಲೇವಾರಿ ಶನಿವಾರ ಆರಂಭವಾಗಿದೆ.

ree

‘ಅವೈಜ್ಞಾನಿಕವಾಗಿ ಎಲ್ಲ ರೀತಿಯ ತ್ಯಾಜ್ಯವನ್ನು ತಂದು ಸರಿಯಲಾಗುತ್ತಿದೆ. ದುರ್ನಾತದ ಜೊತೆಗೆ ದ್ರವತ್ಯಾಜ್ಯದ ಸಮಸ್ಯೆ ಹೆಚ್ಚಾಗಿದೆ. ಇವುಗಳಿಗೆ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿ ಕಣ್ಣೂರು ಗ್ರಾಮ ಪಂಚಾಯಿತಿ ಸದಸ್ಯರು ಮಿಟ್ಟಗಾನಹಳ್ಳಿ ಭೂಭರ್ತಿ ಪ್ರದೇಶದಲ್ಲಿ ತ್ಯಾಜ್ಯ ವಿಲೇವಾರಿ ಪ್ರಕ್ರಿಯೆಯನ್ನು ಮಂಗಳವಾರದಿಂದ ತಡೆಹಿಡಿದು, ಪ್ರತಿಭಟನೆ ನಡೆಸುತ್ತಿದ್ದರು.

‘ಮಿಟ್ಟಗಾನಹಳ್ಳಿ ಭೂಭರ್ತಿ ಪ್ರದೇಶದಲ್ಲಿರುವ ದ್ರವತ್ಯಾಜ್ಯವನ್ನು ಹೊರಹಾಕಬೇಕು, ಸುತ್ತಮುತ್ತಲಿನ ಕೆರೆಗಳಲ್ಲಿರುವ ದ್ರವತ್ಯಾಜ್ಯದ ಜೊತೆಗೆ ಹೂಳು ತೆಗೆದು ಅಭಿವೃದ್ಧಿ ಮಾಡಿಕೊಡಬೇಕು, ಭೂಭರ್ತಿ ಪ್ರದೇಶದ ಸುತ್ತಮುತ್ತಲಿನ ಹಳ್ಳಿಗಳಿಗೆ ಮೂಲಸೌಕರ್ಯ ಕಲ್ಪಿಸಬೇಕು ಎಂದು ಒತ್ತಾಯಿಸಲಾಗಿತ್ತು.

ಬಿಬಿಎಂಪಿ ಮತ್ತು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್ (ಬಿಎಸ್‌ಡಬ್ಲ್ಯೂಎಂಎಲ್) ಅಧಿಕಾರಿಗಳು ಮಾತುಕತೆ ನಡೆಸಿ ಸಮಸ್ಯೆಗಳನ್ನು ಪರಿಹರಿಸುವುದಾಗಿ ಭರವಸೆ ನೀಡಿದ್ದು, ಪ್ರತಿಭಟನೆಯನ್ನು ಹಿಪಡೆದುಕೊಳ್ಳಲಾಗಿದೆ ಎಂದು ಮಿಟ್ಗಾನಹಳ್ಳಿಯ ನಿವಾಸಿ ಅಶ್ವಥಪ್ಪ ಎಂಬುವವರು ಹೇಳಿದ್ದಾರೆ.

ತ್ಯಾಜ್ಯ ಸುರಿಯುವ ಪ್ರದೇಶ 50 ಎಕರೆ ಪ್ರದೇಶದಲ್ಲಿದ್ದು, ಮಿಟ್ಗಾನಹಳ್ಳಿಗೆ ಹತ್ತಿರದಲ್ಲಿದೆ, ಇಲ್ಲಿ 800 ಕ್ಕೂ ಹೆಚ್ಚು ಜನರು ವಾಸಿಸುತ್ತಾರೆ. ತ್ಯಾಜ್ಯದಿಂದ ಹೊರಹೊಮ್ಮುವ ದುರ್ವಾಸನೆ ಅಸಹನೀಯವಾಗಿದ್ದು, ಅನೇಕರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮಳೆ ಬಂದಾಗಲೆಲ್ಲಾ ಸೊಳ್ಳೆಗಳು ಮತ್ತು ನೊಣಗಳ ಸಂತಾನೋತ್ಪತ್ತಿಯು ಹೆಚ್ಚಾಗಿರುತ್ತದೆ. ಬೀದಿ ನಾಯಿಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ಸಮಸ್ಯೆ ಬಗ್ಗೆ ಹಲವು ಅಧಿಕಾರಿಗಳು ಹಾಗೂ ರಾಜಕಾರಣಿಗಳ ಗಮನಕ್ಕೆ ತರಲಾಗಿದ್ದು, ಮನವಿ ಮಾಡಲಾಗಿದೆ. ಆದರೆ, ನಿರ್ಲಕ್ಷ್ಯ ತೋರಿದರು. ಹೀಗಾಗಿ ಪ್ರತಿಭಟನೆ ನಡೆಸಿದೆವು ಎಂದು ತಿಳಿಸಿದ್ದಾರೆ.

ಮಿಟ್ಗಾನಹಳ್ಳಿಯಲ್ಲಿ ಆರು ಬೋರ್‌ವೆಲ್‌ಗಳಿವೆ. ತ್ಯಾಜ್ಯದಿಂದಾಗಿ ಮೂರು ಬೋರ್‌ವೆಲ್‌ಗಳಲ್ಲಿನ ನೀರು ಕಲುಷಿತಗೊಂಡಿದೆ. ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದರೂ, ಯಾವುದೇ ರಾಜಕಾರಣಿಗಳು ಮತ್ತು ಅಧಿಕಾರಿಗಳು ನಮ್ಮ ಸಮಸ್ಯೆಗಳನ್ನು ಪರಿಹರಿಸುವಲ್ಲಿ ತಲೆಕೆಡಿಸಿಕೊಂಡಿರಲಿಲ್ಲ ಎಂದು ಕಣ್ಣೂರು ಗ್ರಾಮ ಪಂಚಾಯತ್ ಸದಸ್ಯ ಮುನಿಸ್ವಾಮಿ ಎಂಬುವವರು ಹೇಳಿದ್ದಾರೆ.

ಮಿಟ್ಟಗಾನಹಳ್ಳಿಯ ಕೆರೆಗಳಿಗೆ ಶೀಘ್ರದಲ್ಲೇ ಮರು ಜೀವ ನೀಡಲಾಗುವುದು. ನಾಲ್ಕು ಎಕರೆ ಜಾಗದಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಿಸಲಾಗುವುದು. ಕಾಮಗಾರಿಗಳಿಗೆ ಶೀಘ್ರದಲ್ಲೇ ಗುತ್ತಿಗೆಗೆ ಆಹ್ವಾನಿಸಲಾಗುವುದು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್‌ನ ಮುಖ್ಯ ಎಂಜಿನಿಯರ್ ಎಂ. ಲೋಕೇಶ್ ಅವರು ಹೇಳಿದ್ದಾರೆ.

ಬಿಟಿಎಂ ಲೇಔಟ್ ಮತ್ತು ನಗರದ ಇತರ ಸ್ಥಳಗಳಲ್ಲಿನ ಘಟಕಗಳಲ್ಲಿ ಸುಮಾರು 2,000 ಟನ್ ತ್ಯಾಜ್ಯವನ್ನು ಸಂಸ್ಕರಿಸಲಾಗುತ್ತದೆ. 3,000 ಟನ್‌ಗಳನ್ನು ಮಿಟ್ಗಾನಹಳ್ಳಿಗೆ ಕಳುಹಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

Comments


Top Stories

bottom of page