ಸಂಸ್ಕೃತೋತ್ಸವದಲ್ಲಿ ಪ್ರಮೋದ ಹೆಗಡೆ ಅಭಿಪ್ರಾಯಸಂಸ್ಕೃತ ಭಾಷೆ ಅಗೋಚರ ಪರಮ ಸತ್ಯ ಹೊಂದಿದೆ
- Ananthamurthy m Hegde
- Nov 24, 2024
- 1 min read
ಯಲ್ಲಾಪುರ: ಜ್ಯೋತಿಷ್ಯ, ಗಣಿತಶಾಸ್ತ್ರವನ್ನು ಆಧರಿಸಿರುವ ವೈಜ್ಞಾನಿಕ ಸ್ವರೂಪದ ಪ್ರಾಚೀನ ಭಾಷೆಯಾದ ಸಂಸ್ಕೃತವು ಅಗೋಚರವಾದ ಪರಮಸತ್ಯವನ್ನು ಹೊಂದಿದೆ ಎಂದು ಪಂಚಾಯತರಾಜ್ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ ಹೇಳಿದರು.
ಅವರು ತಾಲೂಕಿನ ಉಮ್ಮಚಗಿಯಲ್ಲಿ ಶ್ರೀಮಾತಾ ವೈದಿಕ ಶಿಕ್ಷಣ ಸಂಸ್ಥೆ, ಶ್ರೀಮಾತಾ ಸಂಸ್ಕೃತ ಮಹಾಪಾಠಶಾಲೆ ವತಿಯಿಂದ ಹಮ್ಮಿಕೊಂಡಿದ್ದ ಸಂಸ್ಕೃತೋತ್ಸವದಲ್ಲಿ ಭಾಗವಹಿಸಿ ಮಾತನಾಡಿದರು. ದೇಶ ವಿದೇಶದ ವಿಜ್ಞಾನಿಗಳು ಸಂಶೋಧಿಸಿರುವುದನ್ನು ನಮ್ಮ ಋಷಿ ಮುನಿಗಳು ಅಂದೇ ಅರಿತು, ಸಂಸ್ಕೃತ ಗ್ರಂಥಗಳನ್ನು ರಚಿಸಿದ್ದರು. ಇಂತಹ ಅನೇಕ ಗ್ರಂಥಗಳ ಹಕ್ಕುಸ್ವಾಮ್ಯವನ್ನು ಜರ್ಮನಿಯವರು ಬುದ್ಧಿವಂತಿಕೆಯಿAದ ಪಡೆದಿರುವುದು ಎಲ್ಲರಿಗೂ ತಿಳಿದ ಸಂಗತಿ. ನಾವು ಸಂಸ್ಕೃತ ಕಲಿಯಲು ವಂಚಿತರಾಗಿ ಭಾಗ್ಯವಿಹೀನರಾಗಿದ್ದು, ದುರದೃಷ್ಟಕರ. ನಂಬಿಕೆಯ ಭಾಷೆಯಾದ ಸಂಸ್ಕೃತ ನಮ್ಮ ಹೆಮ್ಮೆ ಎಂದರು.
ಸಿ.ಆರ್.ಪಿ ವಿಷ್ಣು ಭಟ್ಟ ಮಾತನಾಡಿ, ವಿದ್ಯಾರ್ಥಿಗಳಿಗೆ ಸಂಸ್ಕೃತದ ಕುರಿತು ಅರಿವು ಮೂಡಿಸಲು ಇಂತಹ ಕಾರ್ಯಕ್ರಮಗಳು ಉಪಯುಕ್ತ ಎಂದರು.
ಮAಚಿಕೇರಿ ಸಿ.ಆರ್.ಪಿ ಕೆ.ಆರ್.ನಾಯ್ಕ ಮಾತನಾಡಿ, ಪ್ರತಿ ವಿದ್ಯಾರ್ಥಿಗಳು ಶಾಲೆಯಲ್ಲಿ ಸಂಸ್ಕೃತ ಆಯ್ಕೆ ಮಾಡಿಕೊಂಡು ಸುಸಂಸ್ಕೃತ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಟಿ.ವಿ.ಹೆಗಡೆ ಬೆದೆಹಕ್ಕಲು ಮಾತನಾಡಿ, ಅನ್ವರ್ಥಕವಾಗಿರಲೆಂಬ ಕಾರಣದಿಂದ ಕಾರ್ಯಕ್ರಮದಲ್ಲಿ ಮಾತಿಗಿಂತ ಕೃತಿಗೆ ಆದ್ಯತೆ ನೀಡಲಾಗಿದೆ. ಪರಸ್ಪರ ಸಂವಹನಕ್ಕೆ ಸಹಕಾರಿಯಾಗುವ ಭಾಷೆಗಳ ಕಲಿಕೆಗೆ ದ್ವಿಭಾಷಾ ನಿಘಂಟುಗಳು ಪ್ರಕಟಗೊಳ್ಳಬೇಕು. ಸಂಸ್ಕೃತ ಸುಲಭದ ಭಾಷೆಯಾದರೂ, ನಮ್ಮ ಮಕ್ಕಳು ಕಷ್ಟಕರವಾದ ವಿಜ್ಞಾನ, ಗಣಿತಗಳಲ್ಲಿ ಹೆಚ್ಚಿನ ಪ್ರತಿಭೆ ಮೆರೆಯುತ್ತಿರುವುದು ಸೋಜಿಗ ಎಂದರು.
ಆರ್.ಎಫ್.ಒ ಬಸವರಾಜ ಬೋಚಳ್ಳಿ, ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ಎಲ್.ಜಿ.ಹೆಗಡೆ ಇದ್ದರು. ಪ್ರಾಚಾರ್ಯ ಡಾ.ನಾಗೇಶ ಭಟ್ಟ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಾಪಕರಾದ ಡಾ.ಕೆ.ಸಿ.ನಾಗೇಶ ಭಟ್ಟ ಹಾಗೂ ವಿ.ನಾಗರಾಜ ಹೆಗಡೆ ನಿರ್ವಹಿಸಿದರು. ಡಾ.ಮಂಜುನಾಥ ಭಟ್ಟ ನಿರ್ವಹಿಸಿದರು.
ಸೆ.೨೯ರಿಂದ ಸೀಮಾ ವ್ಯಾಪ್ತಿಯ ೨೪ ಶಾಲೆಗಳಲ್ಲಿ ಸಂಸ್ಕೃತ ಗೀತ ಗಾಯನ, ಸುಭಾಷಿತ ಕಂಠಪಾಠ, ಪದ ಪಿರಾಮಿಡ್, ರಸಪ್ರಶ್ನೆ ಸ್ಪರ್ಧೆಗಳಲ್ಲಿ ೬೫೦ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಂಸ್ಕೃತೋತ್ಸವದ ಪ್ರಯುಕ್ತ ಏರ್ಪಡಿಸಿದ್ದ ಸಂಸ್ಕೃತ ಜಾಥಾದ ಅಂಗವಾಗಿ ಗೃಹಿಣಿಯರಿಗಾಗಿ ಅಂಗಳ ಸಿಂಗಾರ ಎಂಬ ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಅಧ್ಯಾಪಕ ವಿ.ಶಂಕರ ಭಟ್ಟ ಸ್ಪರ್ಧಾ ಕಾರ್ಯಕ್ರಮ ನಿರ್ವಹಿಸಿದರು. ವೈದಿಕ ರಾಷ್ಟçಗೀತೆಯೊಂದಿಗೆ ಉತ್ಸವ ಮುಕ್ತಾಯಗೊಂಡಿತು.
Comments