ಸಚಿವರಲ್ಲಿ ʼಒಳ್ಳೆ ಮಾತಿನʼ ಬಲ ತುಂಬಲು ಹೊಸ ಪದ್ಧತಿಗೆ ಮುಂದಾದ ಪ್ರಧಾನಿ!
- Ananthamurthy m Hegde
- 2 days ago
- 2 min read

ಪ್ರಧಾನಿ ನರೇಂದ್ರ ಮೋದಿಯವರು ಸೌತ್ ಬ್ಲಾಕ್ ನಲ್ಲಿರುವ ತಮ್ಮ ಹಳೆಯ ಪ್ರಧಾನಿ ಕಚೇರಿಯಿಂದ ಸದ್ಯ ನೂತನ ಸೇವಾತೀರ್ಥ ಭವನಕ್ಕೆ ಇತ್ತೀಚೆಗಷ್ಟೇ ಸ್ಥಳಾಂತರವಾಗಿದ್ದು, ಇಂದು ಐತಿಹಾಸಿಕ ಮೊದಲ ಕ್ಯಾಬಿನೆಟ್ ಮೀಟಿಂಗ್ ನಡೆಯಲಿದೆ. ಈ ಸಭೆಯನ್ನು ಕೇವಲ ಔಪಚಾರಿಕವಾಗಿ ಮಾತ್ರ ನಡೆಸದೆ ಇದನ್ನು ಇನ್ನಷ್ಟು ಸ್ಪೇಷಲ್ ಮಾಡಲು ಪ್ರಧಾನಿಗಳು ಒಳ್ಳೆ ಸುದ್ದಿ ಎಂಬ ವಿನೂತನ ಪದ್ದತಿಯನ್ನು ಪ್ರಾರಂಭಿಸಲು ಮುಂದಾಗಿದ್ದು, ಇದರಲ್ಲಿ ಎಲ್ಲಾ ಸಂಪುಟ ಸದಸ್ಯರು ಸಚಿವಾಲಯಕ್ಕೆ ಸಂಬಂಧಿಸಿದ ಔಪಚಾರಿಕ ವಿಚಾರಗಳ ಕುರಿತ ಒಳ್ಳೆ ಸುದ್ದಿ ಅಥವಾ ತಮ್ಮ ವೈಯಕ್ತಿಕ ವಿಚಾರದಲ್ಲಿ ಸ್ಪೂರ್ತಿದಾಯವಾಗುವ ಒಳ್ಳೆ ಸುದ್ದಿಗಳನ್ನು ಹಂಚಿಕೊಳ್ಳಲು ನಿರೀಕ್ಷಿಸಿದ್ದಾರೆ ಎಂದು ವರದಿಯಾಗಿದ್ದು, ಇಂದಿನ ಸಭೆ ಅತ್ಯಂತ ವಿಭಿನ್ನವಾಗಿರಲಿದೆ.
ಪ್ರಧಾನಿ ನರೇಂದ್ರ ಮೋದಿಯವರು ಫೆ.13ರಂದು ಸೌತ್ ಬ್ಲಾಕ್ನಲ್ಲಿರುವ ಪ್ರಧಾನ ಮಂತ್ರಿ ಕಚೇರಿಯಿಂದ ತಮ್ಮ ಹೊಸ ಕಚೇರಿ ಸೇವಾತೀರ್ಥ ಕ್ಕೆ ಸ್ಥಳಾಂತರವಾಗಿದ್ದಾರೆ. ಪ್ರಧಾನಿಗಳ ಈ ಹೊಸ ಕಚೇರಿಯಲ್ಲಿ ಇಂದು(ಫೆ.24) 11ಗಂಟೆ ಸುಮಾರಿಗೆ ಮೊದಲ ಬಾರಿಗೆ ಕ್ಯಾಬಿನೆಟ್ ಸಭೆ ಕೈಗೊಳ್ಳಲಿದ್ದಾರೆ.
ಈಗ ಹೊಸ ಕಟ್ಟಡದಲ್ಲಿ ಕಾಲಿಟ್ಟಿದ್ದು, ನೂತನ ಕಟ್ಟಡದಲ್ಲಿ ಮೊದಲ ಕ್ಯಾಬಿನೆಟ್ ಸಭೆ ನಡೆಸಲಿದ್ದು, ವಾರದ ಕ್ಯಾಬಿನೆಟ್ ಸಭೆಗಳಲ್ಲಿ, ಪ್ರಧಾನಿ ಮೋದಿ ಅವರು ಕಾರ್ಯಸೂಚಿಯನ್ನು ಮಾತ್ರವಲ್ಲದೆ ವಾರದ ಪ್ರಮುಖ ಬೆಳವಣಿಗೆಗಳ ಬಗ್ಗೆಯೂ ಚರ್ಚಿಸಲಿದ್ದು, ಸಚಿವರ ಪ್ರತಿಕ್ರಿಯೆ ಮತ್ತು ಸಲಹೆಗಳನ್ನು ಪಡೆಯುತ್ತಾರೆ.ಅಲ್ಲದೆ, ಈ ಸಭೆಯಲ್ಲಿ ಕೇವಲ ಔಪಚಾರಿಕ ಕಾರ್ಯಸೂಚಿ ಚರ್ಚೆಗಳನ್ನು ಒಳ್ಳೆ ಸುದ್ದಿಯನ್ನು ಹಂಚಿಕೊಳ್ಳುವಂತೆ ಪ್ರಧಾನಿಗಳು ನಿರೀಕ್ಷಿಸಿದ್ದಾರೆ ಎಂಬ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.
ಈ ಒಳ್ಳೆ ಸುದ್ದಿ ಇವರ ಸಚಿವಾಲಯಕ್ಕೆ ಸಂಬಂಧಿಸಿದ್ದು ಆಗಿರಬಹುದು , ಇದರ ಜೊತೆಗೆ ಅವರ ವೈಯಕ್ತಿಕವೂ ಆಗಿರಬಹುದು. ಜೊತೆಗೆ ಇತರ ಸಚಿವರಿಗೆ ಸ್ಫೂರ್ತಿದಾಯಕವಾಗಬಹುದಾದ ಅನೇಕ ಸ್ಪೂರ್ತಿದಾಯಕ ಘಟನೆಗಳನ್ನು ಸಹ ಒಳ್ಳೆಯ ಸುದ್ದಿ ಎಂದು ಉಲ್ಲೇಖಿಸಲಾಗಿದೆ. ವಿದ್ಯುತ್, ನೀರು, ರಸ್ತೆಗಳು, ಆರೋಗ್ಯ, ರೈಲ್ವೆ, ಶಿಕ್ಷಣ, ಐಟಿ ಮುಂತಾದ ಸಚಿವಾಲಯಗಳಿಂದ ಅನೇಕ ಪ್ರಮುಖ ಸುದ್ದಿಗಳಿದ್ದು, ಇವುಗಳನ್ನು ಹೆಚ್ಚಾಗಿ ಸಂಪುಟ ಸಭೆಗಳಲ್ಲಿ ಒಳ್ಳೆಯ ಸುದ್ದಿಯಾಗಿ ಹಂಚಿಕೊಳ್ಳಲಾಗುವುದು ಎಂದು ನಿರೀಕ್ಷಿಸಲಾಗಿದೆ ಎಂದು ತಿಳಿದುಬಂದಿದೆ.
ಈ ಸಂಪುಟದ ಸದಸ್ಯರನ್ನು ಸಕರಾತ್ಮಕವಾಗಿ ಪ್ರೇರೇಪಿಸಲು ಪ್ರಧಾನ ಮಂತ್ರಿಗಳು ಈ ಪದ್ದತಿಯನ್ನು ಪ್ರಾರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿದ್ದು, ಅಧಿಕೃತ ಕಾರ್ಯಸೂಚಿಯನ್ನು ಕೈಗೆತ್ತಿಕೊಂಡ ನಂತರ ಅನೌಪಚಾರಿಕ ಚರ್ಚೆಗಳ ಸಮಯದಲ್ಲಿ ಇಂತಹ ಒಳ್ಳೆಯ ಸುದ್ದಿಯನ್ನು ಸಾಮಾನ್ಯವಾಗಿ ಹಂಚಿಕೊಳ್ಳಲಾಗುತ್ತದೆ.
ಪ್ರಧಾನಿಗಳ ಹಳೆ ಕಚೇರಿಯಲ್ಲಿ ನಡೆದ ಕೊನೆಯ ಕ್ಯಾಬಿನೆಟ್ ಮೀಟಿಂಗ್ ನಲ್ಲೇನಿತ್ತು?
ಈ ಹಿಂದೆ ಫೆ.13ರಂದು ತಮ್ಮ ಹಳೆಯ ಪ್ರಧಾನ ಮಂತ್ರಿ ಕಚೇರಿಯಲ್ಲಿ ಕೊನೆಯ ಸಚಿವ ಸಂಪುಟ ಸಭೆ ಕೈಗೊಂಡಿದ್ದು, ಹಲವು ಔಪಚಾರಿಕ ಚರ್ಚೆಗಳನ್ನು ನಡೆಸಿದ್ದಾರೆ. ಈ ವೇಳೆ ಆ ಕಟ್ಟಡದ ಕುರಿತು ಹಲವು ಸವಿನೆನಪುಗಳನ್ನು ಹಾಗೂ ಈ ಕಟ್ಟಡದಲ್ಲಿ ಈವರೆಗೂ ತೆಗೆದುಕೊಂಡ ಹಲವು ಐತಿಹಾಸಿಕ ನಿರ್ಧಾರಗಳ ಬಗ್ಗೆ ಹಂಚಿಕೊಂಡಿದ್ದಾರೆಂಬ ಮಾಹಿತಿಯಿದೆ. ಇದರಲ್ಲಿ ಸ್ವಾತಂತ್ರ್ಯದ ನಂತರ ಜವಾಹರಲಾಲ್ ನೆಹರು ಅವರ ಮೊದಲ 4 ಕ್ಯಾಬಿನೆಟ್ ಸಭೆಗಳು ರಾಷ್ಟ್ರಪತಿ ಭವನದಲ್ಲಿ ಹೇಗೆ ನಡೆದವು. ಅಲ್ಲದೆ, ದೇಶದ 4 ಪ್ರಮುಖ ಯುದ್ಧಗಳಿಗೆ ಸೌತ್ ಬ್ಲಾಕ್ನ ವಾರ್ ರೂಮಿನಲ್ಲಿ ಹೇಗೆ ತಂತ್ರಗಳನ್ನು ರೂಪಿಸಲಾಯಿತು ಎಂಬುದನ್ನು ವಿವರಿಸಿದ್ದಾರೆ ಎಂದು ತಿಳಿದುಬಂದಿದೆ.
ಪ್ರಧಾನಿಗಳ ಹೊಸ ಸೇವಾ ತೀರ್ಥ ಭವನ
ಈ ಹಿಂದೆ ರಾಷ್ಟ್ರಪತಿ ಭವನದ ಸಂಕೀರ್ಣದಿಂದ ಕಾರ್ಯನಿರ್ವಹಿಸುತ್ತಿದ್ದ ಸಂಪುಟ ಸಚಿವಾಲಯವನ್ನು ಈಗ ಸೇವಾ ತೀರ್ಥಕ್ಕೆ ಸ್ಥಳಾಂತರಿಸಲಾಗಿದೆ. ಪ್ರಧಾನಿಯವರ ನಿವಾಸವೂ ಹತ್ತಿರದಲ್ಲಿ ನಿರ್ಮಾಣ ಹಂತದಲ್ಲಿದೆ. ಈ ಹೊಸ ಸಂಕೀರ್ಣವು ಸಂಪೂರ್ಣವಾಗಿ ಕಾರ್ಯಾರಂಭ ಮಾಡಿದ ನಂತರ, ಹೊಸ ಸಂಸತ್ ಭವನ, ಪ್ರಧಾನಿ ಕಚೇರಿ, ಅಧಿಕೃತ ನಿವಾಸ ಮತ್ತು ಪ್ರಮುಖ ಸಚಿವಾಲಯಗಳು ಕೆಲವು ಕಿಲೋಮೀಟರ್ ವ್ಯಾಪ್ತಿಯಲ್ಲಿ ನೆಲೆಗೊಳ್ಳಲಿವೆ, ಇದು ಸಮನ್ವಯವನ್ನು ಸರಾಗಗೊಳಿಸುವ ಮತ್ತು VVIP ಗಳ ಚಲನೆಯಿಂದ ಉಂಟಾಗುವ ಸಂಚಾರ ಅಡಚಣೆಗಳನ್ನು ಕಡಿಮೆ ಮಾಡುವ ನಿರೀಕ್ಷೆಯಿದೆ.










Comments