ಸರ್ದಾರ್ ಪಟೇಲ್ ಜನ್ಮದಿನದ ಅಂಗವಾಗಿ ಐಕ್ಯತಾ ಓಟಪಟೇಲರ ಸಂಸ್ಮರಣೆಯೇ ಐಕ್ಯತಾ ಓಟದ ಉದ್ದೇಶ : ಬಿ.ವೈ ವಿಜಯೇಂದ್ರ
- Ananthamurthy m Hegde
- Oct 29, 2024
- 1 min read

ಬೆಂಗಳೂರು: ದೇಶ ಕಂಡ ಧೀಮಂತ ನಾಯಕ, ಈ ದೇಶದ ಮೊದಲ ಗೃಹ ಸಚಿವ 'ಉಕ್ಕಿನ ಮನುಷ್ಯ' ಎಂದೇ ಖ್ಯಾತರಾಗಿದ್ದ ಭಾರತ ರತ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದ ಅಂಗವಾಗಿ, ನಮ್ಮ ದೇಶದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕರೆಯ ಮೇರೆಗೆ ಐಕ್ಯತಾ ಓಟವನ್ನು ಏರ್ಪಡಿಸಲಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.
'ಐಕ್ಯತಾ ಓಟವು' ಬೆಳಿಗ್ಗೆ 'ಗೇಟ್ ನಂ.೨, ಕಂಠೀರವ ಕ್ರೀಡಾಂಗಣ'ದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಈ ದೇಶದ ಐಕ್ಯತೆಗೆ ತಮ್ಮದೇ ಆದ ರೀತಿಯಲ್ಲಿ ಸೇವೆ ಮಾಡಿದವರು. ದೇಶದ ಅಖಂಡತೆಗೂ ವಿಶಿಷ್ಟ ಕೊಡುಗೆ ನೀಡಿದವರು. ಅವರ ಸ್ಮರಣೆ, ಅವರು ದೇಶಕ್ಕೆ ಕೊಟ್ಟ ಕೊಡುಗೆಗಳನ್ನು ಮುಂದಿನ ಪೀಳಿಗೆಗೂ ತಿಳಿಸುವ ಸದುದ್ದೇಶವನ್ನು ಐಕ್ಯತಾ ಓಟ ಹೊಂದಿದೆ ಎಂದರು.
ದೇಶದ ಏಕತೆ, ಅಖಂಡತೆ ಬಗ್ಗೆ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಇದ್ದ ಕನಸನ್ನು ಇಂದಿನ ನಮ್ಮ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನನಸಾಗಿ ಮಾಡುತ್ತಿದ್ದಾರೆ. ಭಾರತವನ್ನು ೨೦೪೭ರ ಹೊತ್ತಿಗೆ ವಿಕಸಿತ ಭಾರತ ಮಾಡುವ ಸಂಕಲ್ಪ ನಮ್ಮ ಪ್ರಧಾನಿ ಮೋದಿಜೀ ಅವರದು. ಆ ಸಂಕಲ್ಪ ಈಡೇರಿಸಲು ದೇಶದ ಅಖಂಡತೆಯೂ ಅಷ್ಟೇ ಮುಖ್ಯ ಎಂದರು.
ವಿರೋಧ ಪಕ್ಷದ ನಾಯಕ ಆರ್.ಅಶೋಕ ಮಾತನಾಡಿ, ಪಟೇಲರು ಕರ್ನಾಟಕದಲ್ಲೂ ನಿಜಾಮ್ ಆಡಳಿತವನ್ನು ರದ್ದು ಮಾಡಿ, ದಂಗೆ, ಅತ್ಯಾಚಾರ, ಅನಾಚಾರಗಳನ್ನು ನಿಲ್ಲಿಸಿ ಭಾರತವನ್ನು ಒಂದುಗೂಡಿಸಿದವರು. ಅವರ ೧೫೦ ವರ್ಷದ ಜನ್ಮದಿನವನ್ನು ನಾವು ಆಚರಿಸುತ್ತಿದ್ದೇವೆ. ದೇಶದ ಏಕತೆ, ದೇಶ ಮುನ್ನಡೆಸಲು, ಅಭಿವೃದ್ಧಿಗಾಗಿ ಈ ಓಟ ಎಂದರು.
ಶಾಸಕ ಕೃಷ್ಣಪ್ಪ, ರವಿ ಸುಬ್ರಹ್ಮಣ್ಯ, ರಘು, ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ನಂದೀಶ್ ರೆಡ್ಡಿ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಹರೀಶ್ ಹಾಗೂ ಪ್ರಮುಖರು ಇದ್ದರು.















Comments