ಐಟಿ, ಬಿಟಿ ದೂರದೃಷ್ಟಿತ್ವ - ಇದು ಮನಮೋಹನ್ ಸಿಂಗ್ ಕೊಡುಗೆ!
- Ananthamurthy m Hegde
- Dec 27, 2024
- 3 min read

1991ರಲ್ಲಿದೇಶದ ಅರ್ಥವ್ಯವಸ್ಥೆ ದಿವಾಳಿ ಅಂಚಿಗೆ ತಲುಪಿತ್ತು. ಅದನ್ನು ಸರಿಪಡಿಸಿ, ಇಂದು ವಿಶ್ವದ ಬಲಿಷ್ಠ ಅರ್ಥವ್ಯವಸ್ಥೆಗಳಲ್ಲಿಭಾರತವೂ ಒಂದು ಎನ್ನುವಂತಾಗಲು ಡಾ.ಮನಮೋಹನ್ ಸಿಂಗ್ ಕಾರಣ. ಆರ್ಬಿಐ ಗವರ್ನರ್, ಅರ್ಥಶಾಸ್ತ್ರಜ್ಞ, ವಿತ್ತ ಸಚಿವ ಮತ್ತು ಪ್ರಧಾನಿಯಾಗಿ ಸಿಂಗ್ ಭಿನ್ನವಾಗಿ ನಿಲ್ಲುತ್ತಾರೆ. ಸದ್ದುಗದ್ದಲಗಳಿಲ್ಲದೇ ಕ್ರಿಯಾಶೀಲತೆ ಮೆರೆದ ಅವರು ಭಾರತದ ರಾಜಕಾರಣದಲ್ಲಿ ಭಿನ್ನವಾಗಿಯೇ ಉಳಿಯುತ್ತಾರೆ.
ಸಜ್ಜನ ರಾಜಕಾರಣಿ, ಮುತ್ಸದ್ದಿ, ಆಡಳಿತದಲ್ಲಿ ಹಲವಾರು ಹುದ್ದೆಗಳನ್ನು ನಿಭಾಯಿಸಿ ಹಂತ ಹಂತವಾಗಿ ಮೇಲೇರಿದರೂ, ಅಧಿಕಾರ ಮತ್ತು ಕೀರ್ತಿಯನ್ನು ತಲೆಗೆ ಹತ್ತಿಸಿಕೊಳ್ಳದವರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್. ದೇಶದ ಮೊದಲ ಸಿಖ್ ಧರ್ಮೀಯ ಪ್ರಧಾನಿ ಎನ್ನುವ ಖ್ಯಾತಿ ಅವರದು. ಜವಾಹರಲಾಲ್ ನೆಹರೂ ಬಳಿಕ ಪ್ರಧಾನಿಯಾಗಿ ಐದು ವರ್ಷ ಪೂರ್ಣಾವಧಿ ಪೂರೈಸಿದ ಬಳಿಕ ಮರು ಆಯ್ಕೆಗೊಂಡ ಮೊದಲ ಪ್ರಧಾನಿ ಎನ್ನುವ ಖ್ಯಾತಿಯೂ ಮನಮೋಹನ್ಸಿಂಗ್ರದು. ಇನ್ನು 90ರ ದಶಕದಲ್ಲಿ ವಿತ್ತ ಸಚಿವರಾಗಿ ಅವರು ಕೈಗೊಂಡ ಆರ್ಥಿಕ ಉದಾರೀಕರಣ ನೀತಿ ಮತ್ತು ಆರ್ಥಿಕ ಸಂಕಷ್ಟದಿಂದ ದೇಶವನ್ನು ಪಾರು ಮಾಡಲು 46 ಟನ್ಗಳಷ್ಟು ಚಿನ್ನ ಒತ್ತೆಯಿಟ್ಟಿದ್ದನ್ನು ದೇಶವಾಸಿಗಳು ಎಂದೆಂದಿಗೂ ನೆನಪಿಟ್ಟುಕೊಳ್ಳುವಂಥದ್ದು. ದೇಶ ಕಂಡ ಓರ್ವ ಅದ್ಭುತ ಸ್ಟೇಟ್ಸ್ಮನ್ ಆಗುವಲ್ಲಿಅವರು ಬೆಳೆದು ಬಂದ ಪರಿಸರದ ಕಾಣಿಕೆಯಿದೆ.
ಇಂದು ನಾವು ಐಟಿ-ಬಿಟಿ ಕ್ಷೇತ್ರದಲ್ಲಿಕ್ರಾಂತಿಯನ್ನು ಕಾಣುತ್ತಿದ್ದೇವೆ. ಕಂಪ್ಯೂಟರ್, ಟೀವಿ, ಡಿವಿಡಿ, ಬೈಕು, ಸ್ಕೂಟರ್ ಮತ್ತು ಕಾರು ಮತ್ತಿತರ ವಸ್ತುಗಳು ಇಂದು ಸಿರಿವಂತರ ಸ್ವತ್ತಾಗಿ ಉಳಿದಿಲ್ಲ. ಇವೆಲ್ಲವೂ ಮಧ್ಯಮವರ್ಗದ ಜನರ ಕೈಗೆಟಕುತ್ತಿವೆ. ಗ್ರಾಹಕರ ಒಂದೇ ಒಂದು ಫೋನ್ ಕಾಲ್ ಅಥವಾ ಇಮೇಲ್ಗೆ ಬ್ಯಾಂಕ್ಗಳು ಇಂದು ಸ್ಪಂದಿಸುತ್ತವೆ. ಎಟಿಎಂ, ಇ-ಬ್ಯಾಂಕಿಂಗ್ ಸೇರಿದಂತೆ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿಅಭೂತಪೂರ್ವ ಬದಲಾವಣೆಯನ್ನು ನಾವಿಂದು ಕಾಣುತ್ತಿದ್ದೇವೆ. ಇದೆಲ್ಲಕ್ಕೂ ಸಿಂಗ್ ಅವರ ದೂರದೃಷ್ಟಿಯ ಆರ್ಥಿಕ ನೀತಿಗಳೇ ಕಾರಣ.
ಬೆಳೆಯುತ್ತಿರುವ ಜನಸಂಖ್ಯೆಗೆ ಉದ್ಯೋಗಾವಕಾಶ ಸೃಷ್ಟಿಸುವ ಕೆಲಸಗಳನ್ನು ಸರಕಾರದ ಜತೆಗೆ ಖಾಸಗಿ ಕಂಪನಿಗಳು ಮಾಡುತ್ತಿವೆ. ಖಾಸಗಿ ಕಂಪನಿಗಳಲ್ಲಿಕಣ್ಣು ಕುಕ್ಕುವ ಸಂಬಳ ಪಡೆಯುವ ದಿನಗಳಲ್ಲಿ ನಾವಿಂದು ಇದ್ದೇವೆ. ಸಿಂಗ್ ಅವರ ಖಾಸಗೀಕರಣ ಮತ್ತು ಉದಾರೀಕರಣದ ನೀತಿಯಿಂದಾಗಿಯೇ ಪರಿಸ್ಥಿತಿ ಹೀಗೆ ಬದಲಾಗಿದೆ. ಖಾಸಗೀಕರಣದ ಫಲದಿಂದ ಅಡುಗೆ ಅನಿಲ ಅಥವಾ ಫೋನ್ ಸಂಪರ್ಕಕ್ಕಾಗಿ ಈಗ ಮೊದಲಿನಂತೆ ವರ್ಷಗಟ್ಟಲೇ ಕಾಯಬೇಕಾಗಿಲ್ಲ. ಯಾರದೇ ಶಿಫಾರಸೂ ಬೇಕಾಗಿಲ್ಲ.
ಜಾಗತೀಕರಣದಿಂದ ಸೃಷ್ಟಿಯಾದ ಅನುಕೂಲಗಳನ್ನು ಸಂಪನ್ಮೂಲಗಳ ಕ್ರೋಡೀಕರಣಕ್ಕೆ ಬಳಸಿಕೊಳ್ಳುವುದು ಸಿಂಗ್ ಕಾರ್ಯಸೂಚಿ. ಈ ಸಂಪನ್ಮೂಲವನ್ನು ಗ್ರಾಮೀಣ ಉದ್ಯೋಗ ಖಾತ್ರಿ, ಕಡ್ಡಾಯ ಶಿಕ್ಷಣ ಹಕ್ಕು ಮತ್ತಿತರ ಜನೋಪಯೋಗಿ ಯೋಜನೆಗಳ ಮೂಲಕ ದೇಶದ ಜನರಿಗೆ ಹಂಚಲು ಸಿಂಗ್ ಯತ್ನಿಸಿದವರು.
ಸಿಂಗ್ ಅವರೇ ಒಮ್ಮೆ ಹೇಳಿದಂತೆ, ಅವರು ಆಕಸ್ಮಿಕವಾಗಿ ರಾಜಕಾರಣಿಯಾದವರು. ಮೊದಲ ಸಲ ಪ್ರಧಾನಿ ಸ್ಥಾನ ಒಲಿದು ಬಂದಾಗ ''ದೇಶ ಮುನ್ನಡೆಸುವ ಅವಕಾಶ ದೊರೆತದ್ದು ಬಯಸದೆ ಬಂದ ಭಾಗ್ಯ,'' ಎಂದಿದ್ದ ಸಿಂಗ್ ಮುಂದೆ, ಅಂದು ದೇಶಕ್ಕೆ ಸಂಬಂಧಿಸಿದಂತೆ ಸಾಕಷ್ಟು ಕನಸುಗಳಿದ್ದವು. ಅವುಗಳನ್ನು ನನಸು ಮಾಡುವ ನಿಟ್ಟಿನಲ್ಲಿಹೆಜ್ಜೆಯಿಟ್ಟ ಸಿಂಗ್ ಅವರನ್ನು ಪ್ರತಿಪಕ್ಷದ ನಾಯಕ ಎಲ್.ಕೆ.ಆಡ್ವಾಣಿ 'ದುರ್ಬಲ ಪ್ರಧಾನಿ' ಎಂದು ನಿಂದಿಸಿದ್ದರು.
ಸಿಂಗ್ ದೇಶದ ವಿತ್ತ ಸಚಿವರಾಗಿ, ಪ್ರಧಾನಿಯಾಗಿ ತೆಗೆದುಕೊಂಡ ನಿರ್ಧಾರದಿಂದ ಭಾರತ ಪ್ರಕಾಶಿಸಿದೆಯೇ ಹೊರತು, ಮಬ್ಬಾಗಿಲ್ಲ ಎನ್ನುವುದನ್ನೂ ಎಲ್ಲರೂ ಒಪ್ಪಬೇಕು. ಜಾಗತೀಕರಣವನ್ನು ಗುಮ್ಮನಂತೆ ಬಿಂಬಿಸಲಾಗಿದ್ದ ದಿನಗಳವು. ಭಾತರದಲ್ಲಿದ್ದ ಲೈಸೆನ್ಸ್ ರಾಜ್ ವ್ಯವಸ್ಥೆಯಿಂದ ಉದ್ಯಮಿಗಳು ಕಂಗೆಟ್ಟಿದ್ದರು. ಲಕ್ಷಿತ್ರ್ಮ ಮಿತ್ತಲ್ರಂತಹ ಉದ್ಯಮಿಗಳು ದೇಶದ ಆಚೆ ಉದ್ಯಮ ತೆರೆಯಲು ಸರಕಾರದಲ್ಲಿದ್ದ ನೀತಿಗಳೇ ಕಾರಣ. ಆಗ ಭಾರತದಂತಹ ದೇಶಕ್ಕೆ ಜಾಗತೀಕರಣ, ಉದಾರೀಕರಣ, ಖಾಸಗೀಕರಣ ನಿಜಕ್ಕೂ ಶಾಪ. ದೇಶಕ್ಕೆ ಕೇಡುಗಾಲ ಸಮೀಪಿಸುತ್ತಿದೆ ಎಂದು ಕೆಲವು ಸ್ವಘೋಷಿತ ಬುದ್ಧಿಜೀವಿಗಳು ಭಯ ಹುಟ್ಟಿಸಿದ್ದರು.
ಉದಾರ ಆರ್ಥನೀತಿಯ ಪರಿಣಾಮ ಇನ್ನು ಭಾರತವನ್ನು ಅಮೆರಿಕದಂತಹ ಬಂಡವಾಳಶಾಹಿ ದೇಶಗಳು ನುಂಗಿ ನೀರು ಕುಡಿಯುತ್ತವೆ ಎಂದೇ ಅಂದು ವ್ಯಾಖ್ಯಾನಿಸಲಾಗಿತ್ತು. ಆದರೆ ಆದದ್ದೇ ಬೇರೆ. ಈಗ ವಿಶ್ವದ ಅಭಿವೃದ್ಧಿಶೀಲ ದೇಶಗಳಲ್ಲಿ ಭಾರತವೂ ಒಂದಾಗಿದೆ. ಜಾಗತೀಕರಣ, ಉದಾರೀಕರಣದಿಂದ ಏನೇನು ಅನುಕೂಲಗಳಿವೆ ಎಂಬುದನ್ನು ಮನವರಿಕೆ ಮಾಡಿಕೊಟ್ಟವರು ಸಿಂಗ್.
ಎಲ್ಲರೂ ನೆನ್ನೆ ಮತ್ತು ಇಂದಿನ ಬಗ್ಗೆ ಯೋಚಿಸುತ್ತಿದ್ದರೆ, ಸಿಂಗ್ ನಾಳೆ ಮತ್ತು ನಾಡಿದ್ದನ್ನು ಯೋಚಿಸುತ್ತಿದ್ದರು. ಹೀಗಾಗಿಯೇ ಭಾರತವನ್ನು ಜಗತ್ತಿನೆದುರು ಮುಕ್ತವಾಗಿ ತೆರೆದಿಡುವ ದಿಟ್ಟ ಸಾಹಸಕ್ಕೆ ಕೈ ಹಾಕಿದರು. ತೆರಿಗೆ ವ್ಯವಸ್ಥೆ ಸರಳೀಕರಣ, ಕಾನೂನು ಸಡಿಲಿಕೆ ಮೂಲಕ ಉದ್ಯಮಕ್ಕೆ ಹಿತಕರವಾದ ವಾತಾವರಣವನ್ನು ಸಿಂಗ್ ಸೃಷ್ಟಿಸಿದರು. ಈ ಫಲವಾಗಿ ಅಪಾರ ವಿದೇಶಿ ಬಂಡವಾಳ ದೇಶಕ್ಕೆ ಹರಿದುಬಂತು. ಅದರ ಜತೆಗೆ ವಿದೇಶಿ ತಂತ್ರಜ್ಞಾನವೂ ಬಂತು.
ಕೇಂಬ್ರಿಡ್ಜ್ ಮತ್ತು ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿವಿದ್ಯಾಭ್ಯಾಸ ಮಾಡಿದ ಸಿಂಗ್, ದೇಶ ಕಂಡ ಪ್ರಚಂಡ ಅರ್ಥಶಾಸ್ತ್ರಜ್ಞ. ಯೋಜನಾ ಆಯೋಗದ ಉಪಾಧ್ಯಕ್ಷ, ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್, ದೇಶದ ಮುಖ್ಯ ಆರ್ಥಿಕ ಸಲಹೆಗಾರ, ಸುಧಾರಣೆಗಳ ಸೂತ್ರಧಾರ, ಪಿ.ವಿ. ನರಸಿಂಹರಾವ್ ಸರಕಾರದಲ್ಲಿ ಹಣಕಾಸು ಮಂತ್ರಿ, ಕಾಂಗ್ರೆಸ್ ಕಾರ್ಯಾಕಾರಿ ಸಮಿತಿಯಲ್ಲಿ ಸದಸ್ಯ, 1998ರಲ್ಲಿರಾಜ್ಯಸಭೆಯ ವಿರೋಧ ಪಕ್ಷದ ನಾಯಕ -ಹೀಗೆ ಸಿಂಗ್ ನಿಭಾಯಿಸಿದ ಜವಾಬ್ದಾರಿ ಮತ್ತು ಹುದ್ದೆಗಳು ಅನೇಕ. ಹೆಜ್ಜೆಯಿಟ್ಟ ಕಡೆಯೆಲ್ಲ ಗೆದ್ದದ್ದು ಅವರ ಹೆಗ್ಗಳಿಕೆ.
2004ರಲ್ಲಿ ಯುಪಿಎ ಮೈತ್ರಿಕೂಟದ ಸರಕಾರದಲ್ಲಿ ಪ್ರಧಾನಮಂತ್ರಿಯಾಗಿ ನೇಮಕಕೊಂಡ ಅವರು, ಆ ಐದು ವರ್ಷಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದರು. ರೈತರ ಸಾಲ ಮನ್ನಾ, ಅಮೆರಿಕದೊಂದಿಗಿನ ನಾಗರಿಕ ಪರಮಾಣು ಒಪ್ಪಂದ. ಉದ್ಯೋಗ ಖಾತ್ರಿ ಯೋಜನೆಗಳು ಸಿಂಗ್ ಸರಕಾರದ ಸಾಧನೆಯ ಕೋಡುಗಳು. ಹೀಗಾಗಿಯೇ 2009ರ ಚುನಾವಣೆಯಲ್ಲೂ ಯುಪಿಎ ಸರಕಾರಕ್ಕೆ ಜನಾದೇಶ ದೊರೆಯಿತು. ಸಿಂಗ್ ಪ್ರಧಾನಿಯಾಗಿ ಮುಂದುವರಿದಿದ್ದರು.
ಸಿಂಗ್ ಪ್ರಧಾನಿಯಾಗಿದ್ದ ಅವಧಿಯಲ್ಲಿ ಜಾರಿಗೆ ಬಂದ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ, ಮಾಹಿತಿ ಹಕ್ಕು ಕಾಯ್ದೆಗಳು ಪರಿಣಾಮಕಾರಿಯಾಗಿವೆ. ಇದರ ಜತೆಗೆ ಕಡ್ಡಾಯ ಶಿಕ್ಷಣದ ಯೋಜನೆಯಿಂದ ದೇಶದಲ್ಲಿಅಕ್ಷರ ಬೆಳಕು ಮೂಡಿದೆ.
ಮನಮೋಹನ್ ಸಿಂಗ್ ಅವರ ದೂರದೃಷ್ಟಿಯ ಫಲ ಭಾರತ-ಅಮೆರಿಕ ನಾಗರಿಕ ಪರಮಾಣು ಒಪ್ಪಂದ. ಈ ವಿಷಯದಲ್ಲಿ ಬಿಗಿ ಪಟ್ಟಿನಿಂದಾಗಿ ಅವರ ಪ್ರಧಾನಿ ಸ್ಥಾನಕ್ಕೆ ಸಂಚಕಾರವೂ ಬಂದಿತ್ತು. ಆದರೂ ಹಿಂದೆ ಸರಿಯದ ಸಿಂಗ್ ಕುರ್ಚಿಗಿಂತಲೂ, ಬದ್ಧತೆಯೇ ಹೆಚ್ಚು ಎನ್ನುವುದನ್ನು ಸಾಧಿಸಿದವರು.
ಲೋಕಸಭೆ ಚುನಾವಣೆ ವೇಳೆ ಆಡ್ವಾಣಿ ಒಂದು ಸವಾಲುವೊಡ್ಡಿದ್ದರು. ''ಅಮೆರಿಕಾ ಶೈಲಿಯಲ್ಲಿ ಟಿ.ವಿ.ಯಲ್ಲಿ ರಾಷ್ಟ್ರೀಯ ಚರ್ಚೆ ನಡೆಯಬೇಕು. ಅದರಲ್ಲಿ ತಮ್ಮೊಂದಿಗೆ ಸಿಂಗ್ ಭಾಗವಹಿಸಬೇಕು. ಆಗ ಅವರ ನಿಜ ಬಣ್ಣ ಬಯಲಾಗುತ್ತದೆ. ಅವರಿಗೆ ಧೈರ್ಯವಿದ್ದರೆ ಚರ್ಚೆಗೆ ಬರಲಿ,'' ಎನ್ನುವ ಎಲ್.ಕೆ. ಆಡ್ವಾಣಿ ಸವಾಲನ್ನು ಸಿಂಗ್ ಸ್ವೀಕರಿಸಲಿಲ್ಲ. ಬದಲಿಗೆ ಅವರು ಖಾರವಾಗಿ ಪ್ರತಿಕ್ರಿಯಿಸಿದ್ದರು. ''ಆಡ್ವಾಣಿ ಅವರ ಜತೆ ಟಿ.ವಿ ಚರ್ಚೆಯಲ್ಲಿ ಭಾಗವಹಿಸಿ ಅವರಿಗೆ ಪರ್ಯಾಯ ಪ್ರಧಾನಿ ಎಂಬ ಪಟ್ಟ ನೀಡಲು ನನಗೆ ಇಷ್ಟವಿಲ್ಲ. ನಾನು ಆಡ್ವಾಣಿಯವರಂತೆ ಏರು ಧ್ವನಿಯಲ್ಲಿಮಾತನಾಡುವ ಭಾಷಣಕಾರನಲ್ಲ,'' ಎನ್ನುವ ಮೂಲಕ ಅವರು ಚರ್ಚೆಯಿಂದ ನುಣುಚಿಕೊಂಡಿದ್ದರು. ''ದೊಡ್ಡ ಧ್ವನಿಯಲ್ಲಿ ಮಾತನಾಡುವುದರಿಂದಲೇ ಒಬ್ಬ ವ್ಯಕ್ತಿ ಸಮರ್ಥನೋ ಅಥವಾ ಅಸಮರ್ಥನೋ ಎಂದು ಅರಿಯಲು ಸಾಧ್ಯವಾಗದು. ಕಠಿಣ ಭಾಷೆ ಉಪಯೋಗಿಸಿ ಮಾತನಾಡುವುದರಿಂದ ಯಾವ ಸಮಸ್ಯೆಗಳೂ ಪರಿಹಾರವಾಗುವುದಿಲ್ಲ,'' ಎಂದು ಸಿಂಗ್ ಮಾರ್ಮಿಕವಾಗಿ ನುಡಿದಿದ್ದರು.
ಸಿಂಗ್ ಬಗ್ಗೆ ಇನ್ನಷ್ಟು ಮತ್ತಷ್ಟು;
* ಸ್ವತಂತ್ರ ಭಾರತದ ಮೊದಲ ಸಿಖ್ ಸಚಿವ ಮನಮೋಹನ್ ಸಿಂಗ್ ಅಲ್ಲ. ಆದರೆ ಮೊದಲ ಸಿಖ್ ಪ್ರಧಾನಿ ಎಂಬ ಹೆಗ್ಗಳಿಕೆ ಅವರದು.
* ನೆಹರೂ ನಂತರ ಐದು ವರ್ಷ ಪೂರೈಸಿ ಮತ್ತೆ ಪ್ರಧಾನಿಯಾದ ಅಭ್ಯರ್ಥಿ ಎಂಬ ಹೆಗ್ಗಳಿಕೆ ಸಿಂಗ್ ಅವರದು.
* ಸಿಂಗ್ ಬಳಿ ಆರ್ಕೂಟ್, ಫೇಸ್ಬುಕ್ ಅಥವಾ ವೈಯಕ್ತಿಕ ಇಮೇಲ್ ಖಾತೆ ಇರಲಿಲ್ಲ! ''ನನ್ನ ಬಳಿ ಅಂತರ್ಜಾಲ ಮಾಧ್ಯಮದಲ್ಲಿಬಳಸಲಾಗುವ ಯಾವುದೇ ಖಾತೆಗಳು ಇಲ್ಲ. ಆದರೆ ಪ್ರಧಾನಮಂತ್ರಿ ವೆಬ್ಸೈಟ್ನಲ್ಲಿನ ವಿವರಗಳನ್ನು ಕೇಳಿ ತಿಳಿದುಕೊಳ್ಳುತ್ತೇನೆ,'' ಎಂದು ಮಕ್ಕಳ ಜತೆ ಕಾರ್ಯಕ್ರಮವೊಂದರಲ್ಲಿಮಾತನಾಡುತ್ತಾ ಸಿಂಗ್ ಹೇಳಿದ್ದರು.
Comments