top of page

ಚಿನ್ನದ ನಾಣ್ಯ ಭೇಟೆಗೆ ಹೊರಟ ಜನ: ಕಾರಣ ಛಾವಾ ಸಿನಿಮಾ!

  • Writer: Ananthamurthy m Hegde
    Ananthamurthy m Hegde
  • Mar 9
  • 2 min read

ಮಧ್ಯಪ್ರದೇಶದ ಬುರ್ಹಾನ್‌ಪುರದಲ್ಲಿರುವ ಅಸೀರ್‌ಗಢ ಕೋಟೆಯಲ್ಲಿ ಚಿನ್ನಕ್ಕಾಗಿ ಜನರು ಹುಡುಕಾಟ ಆರಂಭಿಸಿದ್ದಾರೆ. ನೂರಾರು ಜನ ಲೈಟು, ಮೆಟಲ್‌ ಡಿಟೆಕ್ಷರ್‌ಗಳು, ಹಾರೆ, ಪಿಕಾಸಿಗಳ ಮೂಲಕ ಇಲ್ಲಿಗೆ ದಾಗುಂಡಿ ಇಟ್ಟಿದ್ದಾರೆ. ಇಷ್ಟಕ್ಕೆಲ್ಲ ಕಾರಣವಾಗಿರುವುದು ವಿಕ್ಕಿ ಕೌಶಲ್ ನಟಿಸಿರುವ 'ಛಾವಾ' ಸಿನಿಮಾ!

ಇತ್ತೀಚೆಗಷ್ಟೇ ಬಿಡುಗಡೆ ಕಂಡು ಭರ್ಜರಿ ಹಿಟ್‌ ಆಗಿದ್ದು ವಿಕ್ಕಿ ಕೌಶಲ್‌ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ಛಾವಾ ಸಿನಿಮಾದಲ್ಲಿ ಬುರ್ಹಾನ್‌ಪುರವನ್ನು ಚಿನ್ನದ ಗಣಿ ಎಂದು ಬಿಂಬಿಸಲಾಗಿದೆ. ದರ್ಗಾ ಬಳಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ತೊಡಗಿದ್ದ ಜೆಸಿಬಿ ಯಂತ್ರ ಮಣ್ಣನ್ನು ಅಗೆದು ಹಾರೂನ್ ಶೇಖ್ ಎಂಬ ಗ್ರಾಮಸ್ಥನ ಹೊಲದಲ್ಲಿ ಸುರಿದಿತ್ತು. ಇದರಲ್ಲಿ ಕಾರ್ಮಿಕರಿಗೆ ಪ್ರಾಚೀನ ನಾಣ್ಯಗಳು ಸಿಕ್ಕಿವೆ ಎಂದು ವರದಿಯಾಗಿತ್ತು. ಇದು ಎಲ್ಲೆಡೆ ವದಂತಿಯಾಗಿ ಹರಡಿತ್ತು.

ಈ ಮಣ್ಣಲ್ಲಿ ಮೊಘಲ್ ಕಾಲದ ಚಿನ್ನ ಮತ್ತು ಬೆಳ್ಳಿ ನಾಣ್ಯಗಳು ಸಿಕ್ಕಿವೆ ಎಂದು ಕೆಲವರು ಹೇಳಿಕೊಂಡಿದ್ದಾರೆ. ಅಂದಿನಿಂದ, ಹತ್ತಿರದ ಹಳ್ಳಿಗಳ ಜನರು ಚಿನ್ನದ ಆಸೆಯಿಂದ ಆ ಸ್ಥಳಕ್ಕೆ ಬರುತ್ತಿದ್ದಾರೆ. 'ಛಾವಾ' ಚಿತ್ರದಲ್ಲಿ ಬುರ್ಹಾನ್‌ಪುರದ ಉಲ್ಲೇಖ ಇದಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ.

ಛತ್ರಪತಿ ಸಂಭಾಜಿ ಮಹಾರಾಜ್ ಅವರ ಪ್ರಮುಖ ಸೇನಾ ಕಾರ್ಯಾಚರಣೆಯ ಸ್ಥಳ ಮತ್ತು 'ಚಿನ್ನದ ಗಣಿ' ಎಂದು ನಗರದ ಮೊಘಲ್ ಇತಿಹಾಸವನ್ನು ಚಿತ್ರದಲ್ಲಿ ತೋರಿಸಲಾಗಿದೆ. ಇದರ ಜೊತೆಗೆ ಸ್ಥಳೀಯರು ಇಲ್ಲಿ ನಾಣ್ಯಗಳು ಸಿಗುತ್ತಿವೆ ಎಂದು ಹೇಳಿಕೊಂಡಿದ್ದಾರೆ. ಇದಾದ ಬೆನ್ನಲ್ಲೇ ಜನರು ಸಮರೋಪಾದಿಯಲ್ಲಿ ಇಲ್ಲಿಗೆ ಆಗಮಿಸುತ್ತಿದ್ದಾರೆ.

ಇದರ ಬಗ್ಗೆ ಇಲ್ಲಿ ಸ್ಥಳೀಯ ಆಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಜನರು ದೂರಿದ್ದಾರೆ. "ಇಲ್ಲಿ ನಾಣ್ಯಗಳು ಸಿಗುತ್ತಿವೆ, ಮತ್ತು ಪ್ರತಿ ರಾತ್ರಿ ಜನಸಂದಣಿ ಹೆಚ್ಚುತ್ತಿದೆ. ಇತರ ಹಳ್ಳಿಗಳಿಂದಲೂ ಜನರು ಬರುತ್ತಿದ್ದಾರೆ. ಮತ್ತು ಹಲವರು ನಾಣ್ಯಗಳು ಸಿಕ್ಕಿವೆ ಎಂದೂ ಹೇಳಿಕೊಂಡಿದ್ದಾರೆ. ಆದರೆ ಸರ್ಕಾರ ಮತ್ತು ಆಡಳಿತ ಇದನ್ನು ನಿರ್ಲಕ್ಷಿಸುತ್ತಿವೆ. ನಾನು ಪಂಚಾಯತ್‌ಗೆ ಈ ಬಗ್ಗೆ ತಿಳಿಸಿದ್ದೆ. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ. ಸರ್ಪಂಚರೂ ಈ ಬಗ್ಗೆ ಕ್ರಮ ಕೈಂಡಿಲ್ಲ," ಎಂದು ಸ್ಥಳೀಯ ನಿವಾಸಿ ಮೊಹಮ್ಮದ್ ವಾಸಿಂ ಕಳವಳ ವ್ಯಕ್ತಪಡಿಸಿದ್ದಾರೆ.

ಬುರ್ಹಾನ್‌ಪುರ ಒಂದು ಕಾಲದಲ್ಲಿ ಸಮೃದ್ಧ ಮೊಘಲ್ ನಗರವಾಗಿತ್ತು. ಅಲ್ಲದೆ ಇಲ್ಲಿ ಚಿನ್ನ ಮತ್ತು ಬೆಳ್ಳಿ ನಾಣ್ಯಗಳನ್ನು ಉತ್ಪಾದಿಸಲು ಒಂದು ಟಂಕಸಾಲೆ ಕೂಡ ಇತ್ತು ಎಂದು ಇತಿಹಾಸಕಾರರು ಹೇಳಿದ್ದರು. ಸಂಘರ್ಷದ ಸಮಯದಲ್ಲಿ ಜನರು ತಮ್ಮ ಸಂಪತ್ತನ್ನು ಸುರಕ್ಷಿತವಾಗಿಡಲು ನೆಲದಡಿಯಲ್ಲಿ ಹೂಳುತ್ತಿದ್ದರು. ಈ ಹಿನ್ನೆಲೆಯಲ್ಲಿ ಇದನ್ನೇ ಈಗ ಪತ್ತೆ ಹಚ್ಚಲು ಜನರು ಮುಂದಾಗಿದ್ದಾರೆ. ಆದರೆ ಇದರಿಂದ ಅಮೂಲ್ಯ ಸಂಪತ್ತು ನಷ್ಟವಾಗಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

"ಅಸೀರ್‌ಗಢ‌ನಲ್ಲಿ ಇಂತಹ ನಾಣ್ಯಗಳು ಮೊದಲು ಕಂಡುಬಂದಿವೆ ಎಂಬುದು ನಿಜ. ಆಡಳಿತವು ಇದನ್ನು ಗಂಭೀರವಾಗಿ ಪರಿಗಣಿಸಬೇಕು, ಪರಿಶೋಧನೆಗೆ ವೈಜ್ಞಾನಿಕ ವಿಧಾನಗಳನ್ನು ಬಳಸಬೇಕು ಮತ್ತು ಕಂಡುಬರುವ ಯಾವುದೇ ಐತಿಹಾಸಿಕ ನಿಧಿಗಳನ್ನು ಸಂರಕ್ಷಿಸಬೇಕು," ಎಂದು ಜಿಲ್ಲಾ ಪುರಾತತ್ವ ಸದಸ್ಯ ಶಾಲೀಕ್ರಾಂ ಚೌಧರಿ ಆಗ್ರಹಿಸಿದ್ದಾರೆ.

ವಿರೋಧ ಪಕ್ಷ ಕಾಂಗ್ರೆಸ್ ಸಹ ಕ್ರಮಕ್ಕೆ ಆಗ್ರಹಿಸಿದ್ದು, ಈ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪ್ರದೇಶದಲ್ಲಿ ಅನಧಿಕೃತ ಉತ್ಖನನದ ಮೇಲೆ ನಿರ್ಬಂಧಗಳನ್ನು ವಿಧಿಸುವ ಸುಳಿವನ್ನು ನೀಡಿದ್ದಾರೆ. ಅನಧಿಕೃತ ಉತ್ಖನನವನ್ನು ನಿಷೇಧಿಸಲಾಗುವುದು ಮತ್ತು ಅಗತ್ಯವಿದ್ದರೆ ಕಾನೂನು ಕ್ರಮ ಕೂಡ ಕೈಗೊಳ್ಳಲಾಗುವುದು ಎಂದು ಬುರ್ಹಾನ್‌ಪುರ ಪೊಲೀಸ್ ವರಿಷ್ಠಾಧಿಕಾರಿ ದೇವೇಂದ್ರ ಪಾಟಿದಾರ್ ಭರವಸೆ ನೀಡಿದ್ದಾರೆ.

Comments


Top Stories

bottom of page