top of page

ದೇಶದ 2ನೇ ಅತೀ ಉದ್ದದ ಸಿಗಂದೂರು ಕೇಬಲ್‌ ಸೇತುವೆ ಇಂದು ಲೋಕಾರ್ಪಣೆ: ಏನಿದರ ವೈಶಿಷ್ಟ್ಯ?

  • Writer: Ananthamurthy m Hegde
    Ananthamurthy m Hegde
  • Jul 14
  • 2 min read

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಸೋಮವಾರ ರಾಷ್ಟ್ರೀಯ ಹೆದ್ದಾರಿ 369E ನಲ್ಲಿ ಅಂಬಾರಗೋಡ್ಲು ಮತ್ತು ಕಳಸವಳ್ಳಿ ನಡುವಿನ ಶರಾವತಿ ಹಿನ್ನೀರಿನ ಸೇತುವೆಯನ್ನು ಉದ್ಘಾಟಿಸಲಿದ್ದಾರೆ.

ಶರಾವತಿ ಹಿನ್ನೀರಿನ ಮೇಲೆ ನಿರ್ಮಿಸಲಾದ ಬಹುನಿರೀಕ್ಷಿತ ಕೇಬಲ್-ಸ್ಟೇಡ್ ಸೇತುವೆಯು ರಾಜ್ಯದಲ್ಲಿಯೇ ಅತಿ ಉದ್ದವಾಗಿದೆ ಮತ್ತು ದೇಶದಲ್ಲಿಯೇ ಎರಡನೇ ಅತಿ ಉದ್ದವಾದ ಸೇತುವೆಯಾಗಿದೆ. 2.44 ಕಿ.ಮೀ ಉದ್ದದ 16 ಮೀ ಅಗಲದ ದ್ವಿಪಥದ ಸೇತುವೆ ನಿರ್ಮಾಣಕ್ಕೆ ಒಟ್ಟು 473 ಕೋಟಿ ರೂ ವೆಚ್ಚವಾಗಿದೆ.

ree

ಸಾಗರ ಮತ್ತು ಹೊಸನಗರ ತಾಲ್ಲೂಕುಗಳ ಹಲವಾರು ಹಳ್ಳಿಗಳಿಗೆ ಹಾಗೂ ಸಿಗಂದೂರು ಚೌಡೇಶ್ವರಿ ಮತ್ತು ಕೊಲ್ಲೂರು ಮೂಕಾಂಬಿಕೆಯಂತಹ ಜನಪ್ರಿಯ ದೇವಾಲಯಗಳಿಗೆ ಸಂಪರ್ಕ ಕಲ್ಪಿಸುತ್ತದೆ. 70ರ ದಶಕದಲ್ಲಿ ಶರಾವತಿ ನದಿಗೆ ಲಿಂಗನಮಕ್ಕಿ ಡ್ಯಾಮ್ ಕಟ್ಟಿದಾಗ ಅದರ ಹಿನ್ನೀರಿನಿಂದ ಸಾಗರ ತಾಲೂಕಿನ ಶರಾವತಿ ಕಣಿವೆ 2 ಭಾಗವಾಗಿ ವಿಭಜನೆಯಾಯಿತು.

ಇದರಿಂದ ನದಿಯ ಒಂದು ಭಾಗದಲ್ಲಿ ಉಳಿದವರು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿ ಬದುಕುವಂತಾಗಿತ್ತು. ಅಲ್ಲಿನ ಜನ 2 ಕಿಮೀ ಅಂತರದ ನದಿ ದಾಟಲು ವ್ಯವಸ್ಥೆ ಇಲ್ಲದೇ ಸಾಗರ ತಾಲೂಕು ಕೇಂದ್ರವನ್ನು ತಲುಪಬೇಕಾದರೆ ಸುಮಾರು 80 ರಿಂದ 100 ಕಿ.ಮೀ. ರಸ್ತೆ ಮಾರ್ಗದಲ್ಲಿ ಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MoRTH) ಈ ಯೋಜನೆಗೆ ಮಾರ್ಚ್ 2019 ರಲ್ಲಿ ಅನುಮೋದನೆ ನೀಡಿತು ಮತ್ತು ಅದೇ ವರ್ಷ ಡಿಸೆಂಬರ್‌ನಲ್ಲಿ ನಿರ್ಮಾಣ ಕಾರ್ಯ ಪ್ರಾರಂಭವಾಯಿತು. ಇದನ್ನು ಮಧ್ಯಪ್ರದೇಶದ ದಿಲೀಪ್ ಬಿಲ್ಡ್‌ಕಾನ್ ಲಿಮಿಟೆಡ್ ನಿರ್ಮಾಣ ಮಾಡಿದೆ. ಈ ಸೇತುವೆಯು ದೇಶದಲ್ಲಿ MoRTH ಅನುಮೋದಿಸಿದ ಎಂಟನೇ ಹೆಚ್ಚುವರಿ-ಡೋಸ್ಡ್ ಕೇಬಲ್-ಸ್ಟೇಡ್ ಕಮ್-ಬ್ಯಾಲೆನ್ಸ್ಡ್ ಕ್ಯಾಂಟಿಲಿವರ್ ಸೇತುವೆಯಾಗಿದೆ.

ಸಿಗಂದೂರು ಸೇತುವೆ 2.44 ಕಿ.ಮೀ. ಉದ್ದವಿದೆ. ಇದರಲ್ಲಿ 740 ಮೀಟರ್ ಮಾತ್ರ ಕೇಬಲ್ ಸೇತುವೆ ಇದೆ. 30ರಿಂದ 55 ಮೀಟ‌ರ್ ಎತ್ತರದ 17 ಪಿಲ್ಲರ್‌ಗಳಿವೆ. ಇದು ದ್ವಿಪಥ ಹೊಂದಿದ್ದು, 2 ಕಡೆ 1.5 ಮೀಟರ್ ಅಗಲದ ಪುಟ್ಪಾತ್ ಕೂಡ ಇದೆ.

ಪ್ರತೀ ಪಿಲ್ಲರ್ ಫೌಂಡೇಶನ್ 177 ಮೀಟ‌ರ್ ಅಂತರ ಇದೆ. ಈ ಸೇತುವೆಗೆ 30 ಮೀಟ‌ರ್ ಅಂತರದಲ್ಲಿ 80 ಪಿಲ್ಲರ್ ಫೌಂಡೇಶನ್ ಹಾಕಬೇಕಿತ್ತು. ಆದರೆ ಇದನ್ನು 19 ಪಿಲ್ಲರ್ ಫೌಂಡೇಶನ್‌ನಲ್ಲೇ ಮುಗಿಸಲಾಗಿದೆ. 177, 105, 93 ಮೀಟರ್ ಅಂತರದಲ್ಲಿ ಪಿಲ್ಲರ್‌ಗಳಿವೆ. ಇದು 2019ರಲ್ಲಿ ಘೋಷಣೆ ಆಗಿದ್ದು ಆಗ ಇದು ನೂತನ ತಂತ್ರಜ್ಞಾನವಾಗಿತ್ತು. ಈಗ ಇದಕ್ಕಿಂತ ಸುಧಾರಿತ ತಂತ್ರಜ್ಞಾನಗಳು ಬಂದಿವೆ.

ಸೇತುವೆಯು 604 ಬಾಕ್ಸ್ ಗಿರ್ಡರ್ ವಿಭಾಗಗಳು, 1.8 ಮೀಟರ್ ವ್ಯಾಸದ 164 ಪೈಲ್‌ಗಳು, ನಾಲ್ಕು ಪೈಲನ್‌ಗಳಲ್ಲಿ 96 ಕೇಬಲ್‌ಗಳು ಮತ್ತು ಗೋಳಾಕಾರದ ಬೇರಿಂಗ್‌ಗಳನ್ನು ಹೊಂದಿದೆ. ಹೊಸ ಸೇತುವೆಯು ಪ್ರಯಾಣದ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಮತ್ತು ಸ್ಥಳೀಯ ಪ್ರವಾಸೋದ್ಯಮ ಮತ್ತು ಆರ್ಥಿಕ ಚಟುವಟಿಕೆಯನ್ನು ಹೆಚ್ಚಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

ಸ್ಥಳೀಯ ನಿವಾಸಿಗಳು, ಕಾರ್ಯಕರ್ತರು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಂಸದ ಬಿ.ವೈ. ರಾಘವೇಂದ್ರ ಮತ್ತು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಪ್ರಯತ್ನದ ಪರಿಣಾಮವಾಗಿ ಎಂಒಆರ್‌ಟಿಎಚ್ ಸೇತುವೆ ನಿರ್ಮಾಣವನ್ನು ಕೈಗೆತ್ತಿಕೊಂಡಿತು.

Comments


Top Stories

bottom of page