ಇಡಗುಂದಿ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಫೆ.೭ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ
ಯಲ್ಲಾಪುರ: ಕ್ಯಾನ್ಸರ್ ಹಾಗೂ ವಿವಿಧ ರೋಗಗಳ ನಿವಾರಣೆ, ರೈತರಿಗೆ ಎದುರಾಗುವ ಸಮಸ್ಯೆಗಳ ನಿವಾರಣೆಗೆ ಪ್ರಾರ್ಥಿಸಿ ತಾಲೂಕಿನ ಇಡಗುಂದಿಯ ರಾಮಲಿಂಗ ದೇವಸ್ಥಾನದಲ್ಲಿ ಫೆ.7 ರಿಂದ 11 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸ್ವರ್ಣವಲ್ಲೀ ಶ್ರೀಗಳ ನಿರ್ದೇಶನದಂತೆ ಯಲ್ಲಾಪುರ ಸೀಮಾ ಪರಿಷತ್ ನೇತೃತ್ವದಲ್ಲಿ ಯಲ್ಲಾಪುರ ತಾಲೂಕಿನ ಎಲ್ಲ ಭಕ್ತರ ಸಹಕಾರದೊಂದಿಗೆ ಈ ಕಾರ್ಯಕ್ರಮ ಆಯೋಜಿಸಲಾಗಿದೆ.
ಗಣಹವನ, ಧನ್ವಂತರಿ, ಸುಬ್ರಹ್ಮಣ್ಯ ಹವನ, ನವಚಂಡಿ, ಮಹಾ ಮೃತ್ಯುಂಜಯ ಹವನ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ಐದು ದಿನಗಳ ಕಾಲ ನಡೆಯಲಿದೆ. ಪ್ರತಿದಿನ ಸಂಜೆ ವಿದ್ವಾಂಸರಿಂದ ಧಾರ್ಮಿಕ ಉಪನ್ಯಾಸ ನಡೆಯಲಿದೆ. ಕೊನೆಯ ದಿನ ಸ್ವರ್ಣವಲ್ಲೀ ಶ್ರೀಗಳು ಸಾನ್ನಿಧ್ಯ ವಹಿಸಿ, ಆಶೀರ್ವದಿಸಲಿದ್ದಾರೆ.
ಕಾರ್ಯಕ್ರಮದ ಪೂರ್ವಸಿದ್ಧತಾ ಸಭೆ ಸೀಮಾ ಪರಿಷತ್ ಅಧ್ಯಕ್ಷ ನಾಗೇಶ ಹೆಗಡೆ ಪಣತಗೇರಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ವಿವಿಧ ಸಮಿತಿಗಳ ಪ್ರಮುಖರಾದ ಡಿ.ಶಂಕರ ಭಟ್ಟ, ನಾರಾಯಣ ಭಟ್ಟ ಏಕಾನ ವೇ.ರಾಮಚಂದ್ರ ಭಟ್ಟ ಹಿತ್ಲಕಾರಗದ್ದೆ, ವಿ.ಎನ್.ಭಟ್ಟ, ಚಂದ್ರಕಲಾ ಭಟ್ಟ, ಶ್ರೀಪಾದ ಕೆರೆಗದ್ದಡ, ಅಣ್ಣಯ್ಯ ಭಾಗ್ವತ, ಸೀತಾರಾಮ ಗಾಂವ್ಕರ, ತಿಮ್ಮಣ್ಣ ಭಾಗ್ವತ ಇತರರು ಭಾಗವಹಿಸಿದ್ದರು.







Comments