ಚಂದಗುಳಿಯಲ್ಲಿ ಕರಡಿ ದಾಳಿ : ವ್ಯಕ್ತಿಗೆ ಗಂಭೀರ ಗಾಯ
- Ananthamurthy m Hegde
- Dec 21, 2024
- 1 min read

ಯಲ್ಲಾಪುರ: ತಾಲೂಕಿನ ಚಂದ್ಗುಳಿ ವ್ಯಾಪ್ತಿಯ ಉಪಳೇಶ್ವರ ಹುತ್ಕಂಡ ಭಾಗದಲ್ಲಿ ಮೂರು ಕರಡಿಗಳು ಸಂಚರಿಸುತ್ತಿದ್ದು ಶನಿವಾರ ಬೆಳ್ಳಂಬೆಳಿಗ್ಗೆ ವ್ಯಕ್ತಿಯೊಬ್ಬರ ಮೇಲೆ ಧಾಳಿ ನಡೆಸಿ ಗಂಭೀರ ಗಾಯಗೊಳಿಸಿದ ಘಟನೆ ನಡೆದಿದೆ.
ಚಂದ್ಗುಳಿ ಪಂಚಾಯತದ ಸದಸ್ಯ ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷರೂ ಆಗಿದ್ದ ಆರ್.ಎಸ್.ಭಟ್ಟ ಗಾಯಗೊಂಡ ವ್ಯಕ್ತಿ.
ಶನಿವಾರ ಬೆಳಿಗ್ಗೆ ಏಳು ಗಂಟೆ ವೇಳೆಗೆ ಕಾರ್ಯನಿರ್ಮಿತ್ತ ದ್ವಿಚಕ್ರ ವಾಹನದಲ್ಲಿ ಕಸವಿಲೇವಾರಿ ಘಟಕದ ಬಳಿ ಮಾಯನಜಡ್ಡಿ ಮಾರ್ಗದಲ್ಲಿ ಸಾಗುತ್ತಿರುವಾಗ ಎರಡು ಕರಡಿಗಳು ದಾಳಿ ನಡೆಸಿದವು. ಮೊದಲು ಅವರ ಕಾಲನ್ನು ಘಾಸಿಗೊಳಿಸಿತು. ನಂತರ ಇವರು ಕೂಗಾಡುತ್ತ ಬೈಕ್ ನಲ್ಲಿ ತಪ್ಪಿಸಿಕೊಂಡು ಹೋದಾಗಲೂ ಬೆಂಬಿಡದ ಕರಡಿಗಳು ಮುಂದೆ ಹೋಗಿ ಅಡ್ಡಗಟ್ಟಿ ಮುಖದ ಎರಡು ಭಾಗದ ಕೆನ್ನೆಗಳಿಗೆ ಭುಜಕ್ಕೆ ತೊಡೆಯ ಭಾಗದಲ್ಲಿ ಗಂಭೀರವಾಗಿ ಘಾಸಿಗೊಳಿಸಿದೆ. ಎರಡು ಕರಡಿಗಳ ಜೊತೆ ಒಂದು ಮರಿಯೂ ಇದೆ. ನಿರ್ಜನ ಪ್ರದೇಶವಾದ ಕಾರಣ ಹೇಗೋ ಮುಂದುವರೆದು ಸಮೀಪದ ಒಬ್ಬರ ಮನೆ ಸೇರಿದ ಆರ್.ಎಸ್.ಭಟ್ಟ ನಂತರ ಅವರನ್ನು ಕೆಲವರು ತಕ್ಷಣದಲ್ಲಿ ಸರಕಾರಿ ಆಸ್ಪತ್ರೆಗೆ ಕರೆತಂದರು. ಹೆಚ್ವಿನ ಚಿಕಿತ್ಸೆಗೆ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆರ್.ಎಸ್. ಭಟ್ಟರವರಿಗೆ ಕರಡಿ ದಾಳಿ ನಡೆಸಿ ಘಾಸಿಗೊಳಿಸಿದ ಸಂಗತಿ ತಿಳಿದ ಶಾಸಕ ಶಿವರಾಮ ಹೆಬ್ಬಾರ್ ತಾಲೂಕಾಸ್ಪತ್ರೆಗೆ ತೆರಳಿ ಗಾಯಾಳುವಿನ ಸ್ಥಿತಿಯನ್ನು ವೀಕ್ಷಿಸಿದರು.
ಈ ಭಾಗದಲ್ಲಿ ಈ ತರಹ ಕರಡಿ, ಚಿರತೆಗಳ ಉಪಟಳ ಇತ್ತೀಚಿನ ದಿನದಲ್ಲಿ ವ್ಯಾಪಕವಾಗಿದ್ದು ರಾತ್ರಿಯಲ್ಲದೇ ಹಗಲಿನಲ್ಲಿನಲ್ಲಿಯೂ ನಿರ್ಜನ ಒಳ ರಸ್ತೆಗಳಲ್ಲಿ ಸಂಚರಿಸುವದು ಭಯಭೀತಿಯನ್ನು ಸೃಷ್ಟಿಸಿದೆ. ಶಾಲಾ ಮಕ್ಕಳು ಬೆಳಗಿನ ಜಾವ ಸಂಜೆ ಹೊತ್ತಿನಲ್ಲಿ ದೂರದ ಹಳ್ಳಿಗಳಿಗೆ ಸಾಗಬೇಕಿದೆ. ಈ ಘಟನೆ ಈ ಭಾಗದ ಜನರಲ್ಲಿ ಆತಂಕವನ್ನು ಸೃಷ್ಠಿಸಿದೆ. ಸಂಬಂಧಿಸಿದ ಇಲಾಖೆ ಜನರೊಡಗೂಡಿ ಕೂಡಲೇ ಕ್ರಮವಹಿಸುವಂತೆ ಭಾರತೀಯ ಕಿಸಾನ್ ಸಂಘ ಸೇರಿದಂತೆ ರೈತಪರ ಸಂಘಟಕರು ಆಗ್ರಹಿಸಿದ್ದಾರೆ.












Comments