ಮಾರುಕೇರಿಯಲ್ಲಿ ಅಡಿಕೆ ಕಳ್ಳತನ ಪ್ರಕರಣ; ನಾಲ್ವರು ಆರೋಪಿಗಳ ಬಂಧನ
- Ananthamurthy m Hegde
- Aug 9
- 1 min read

ಭಟ್ಕಳ: ಮಾರುಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಟಗೊಂಡ ಗ್ರಾಮದಲ್ಲಿ ನಡೆದ ಅಡಿಕೆ ಕಳ್ಳತನ ಪ್ರಕರಣವನ್ನು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯವರು ಭೇದಿಸಿ, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿ ಪರಾರಿಯಾಗಿರುವ ಘಟನೆ ಭಟ್ಕಳದಲ್ಲಿ ನಡೆದಿದೆ.
ಮೊಹಮ್ಮದ್ ಸಾಧಿಕ್ ಶೇಖ , ಮೊಹಮ್ಮದ್ ಖಾಜಾ, ಮೊಹಮ್ಮದ್ ಇರ್ಶಾದ್, ಮೊಹಮ್ಮದ್ ಮುಸಾದಿಕ್ ಬಂಧಿತ ಆರೋಪಿಗಳು. ಆರೋಪಿ ಮೊಹಮ್ಮದ್ ನಿಜಾಮ್ ಹೆಬಳೆ ಪರಾರಿಯಾಗಿದ್ದಾನೆ.
ಪೊಲೀಸರ ಪ್ರಕಾರ, ಸುಮಾರು ಎರಡು ತಿಂಗಳ ಹಿಂದೆ ಸಾಧಿಕ್ ಶೇಖ ಮತ್ತು ಖಾಜಾ, ನಾಗಪ್ಪಯ್ಯ ಭಟ್ಟ ಅವರ ಹೊಸ ಮನೆಯ ಟೈಲ್ಸ್ ಹಾಕುವ ಕಾಮಗಾರಿ ನಡೆಸುತ್ತಿದ್ದಾಗ, ಪಕ್ಕದ ಹಳೆಯ ಮನೆಯಲ್ಲಿ ಸಂಗ್ರಹಿಸಿದ್ದ ಅಡಿಕೆ ಚೀಲವನ್ನು ಗಮನಿಸಿದ್ದರು. ಬಳಿಕ ತಮ್ಮ ಸಹಚರರ ಸಹಾಯದಿಂದ ಕೆಲ ದಿನಗಳ ನಂತರ ಮಧ್ಯರಾತ್ರಿ ಆ ಮನೆಗೆ ನುಗ್ಗಿ ಅಡಿಕೆ ಚೀಲ ಕದ್ದೊಯ್ದಿದ್ದರು.
ಮನೆಯ ಮಾಲಿಕ ನಾಗಪ್ಪಯ್ಯ ಭಟ್ಟ ಅವರು ಜುಲೈನಲ್ಲಿ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ , ಬಂಧಿತರಿಂದ 175 ಕೆ.ಜಿ. ಅಡಿಕೆ ಹಾಗೂ ಕಳ್ಳತನಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಂಡಿದ್ದಾರೆ.
ಪರಾರಿ ಆರೋಪಿಯ ಬಂಧನಕ್ಕಾಗಿ ಶೋಧ ಮುಂದುವರಿದಿದ್ದು, ಕಾರ್ಯಾಚರಣೆಯಲ್ಲಿ ಪಿಎಸ್ಐ ಮಂಜುನಾಥ ಎ. ಲಿಂಗಾರೆಡ್ಡಿ, ಎಎಸ್ಐ ಗಣಪತಿ ಬೆನಕಟ್ಟಿ ಸೇರಿದಂತೆ ಸಿಬ್ಬಂದಿ ಪಾಲ್ಗೊಂಡಿದ್ದರು.














Comments